ಅಕ್ಟೋಬರ್ 1ರಿಂದ ವಿದ್ಯುತ್ ಬಳಕೆಯಲ್ಲಿ ಶೇ.25ರಷ್ಟು ಖೋತಾ
ಬೆಂಗಳೂರು, ಸೆ.12–ಶರಾವತಿ ವಿದ್ಯುತ್ ಉತ್ಪತ್ತಿ ಕೇಂದ್ರಕ್ಕೆ ನೀರು ಒದಗಿಸುವ ಲಿಂಗನಮಕ್ಕಿ ಜಲಾಶಯಕ್ಕೆ ನಿರೀಕ್ಷಿಸಿದಷ್ಟು ನೀರು ಬಂದಿಲ್ಲವಾದ ಕಾರಣ, ಮುಂಜಾಗ್ರತೆ ಕ್ರಮವಾಗಿ ಅಕ್ಟೋಬರ್ 1ರಿಂದ ವಿದ್ಯುತ್ ಬಳಕೆಯಲ್ಲಿ ಶೇಕಡಾ 25ರಷ್ಟು ಖೋತಾ ವಿಧಿಸಲಾಗುವುದು.
ಈ ಸಂಬಂಧದಲ್ಲಿ ಇಂದು ವಿದ್ಯುತ್ ಮಂಡಳಿಯೊಡನೆ ಚರ್ಚೆ ನಡೆಸಿದ ವಿದ್ಯುತ್ ಸಚಿವ ಶ್ರೀ ಎಚ್.ಎಂ. ಚನ್ನಬಸಪ್ಪ ಅವರು ‘ಲಿಂಗನಮಕ್ಕಿ ಜಲಾಶಯ ಸೆಪ್ಟೆಂಬರ್– ನವೆಂಬರ್’ ಅವಧಿಯಲ್ಲಿ ತುಂಬದಿದ್ದರೆ ಮುಂದೆ ಶೇಕಡಾ 40ರಷ್ಟು ವಿದ್ಯುತ್ ಖೋತಾ ಮಾಡಬೇಕಾಗುತ್ತದೆ. ಅದರಿಂದಾಗಿ ಈಗಿನಿಂದಲೇ ಖೋತಾ ಜಾರಿಗೆ ತರಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ’ ಎಂದು ಇಂದು ವರದಿಗಾರರಿಗೆ ತಿಳಿಸಿದರು.
ಕೆಂಗಲ್ ‘ತಪಸ್ಸು’ ಆರಂಭ
ಬೆಂಗಳೂರು, ಸೆ.12– ಮಾಜಿ ರೈಲ್ವೇ ಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಅವರು ಇಂದು 21 ದಿನಗಳ ಕಟು ಪ್ರಾರ್ಥನ ಹಾಗೂ ವೃತವನ್ನು ಆರಂಭಿಸಿದರು.
ಇದರ ಉದ್ದೇಶ ಕುಡಿತ ಮತ್ತು ಜಾತೀಯತೆಯಿಂದ ಕಾಂಗ್ರೆಸ್ಸಿನ ಶುದ್ದೀಕರಣ ಹಾಗೂ ರಾಜಕೀಯದಲ್ಲಿ ಉನ್ನತ ಮಟ್ಟದ ಧ್ಯೇಯ ಆದರ್ಶ ಸ್ಥಾಪನೆ.
ಪ್ರಾರ್ಥನೆಯ ಸ್ಥಳ ಗೌಪ್ಯವಾಗಿಡಲಾಗಿದೆ. ಬಳ್ಳಾರಿ ರಸ್ತೆಯಲ್ಲಿರುವ ಮನೆಯಲ್ಲಿ ವಿಚಾರಿಸಿದವರಿಗೆಲ್ಲಾ ಒಂದೇಉತ್ತರ ‘ಅವ್ರು ಎಲ್ಲಿದ್ದಾರೋ ಗೊತ್ತಿಲ್ಲ’.