ಕಾಶ್ಮೀರ ಹತೋಟಿ ರೇಖೆ ಗುರುತಿಸುವಿಕೆ ಅಪೂರ್ಣ: ಭಾರತ–ಪಾಕಿಸ್ತಾನ ಸೈನ್ಯ ವಾಪಸಾತಿ ಮತ್ತೆ ಮುಂದಕ್ಕೆ
ನವದೆಹಲಿ, ಸೆ. 15– ಭಾರತ ಮತ್ತು ಪಾಕಿಸ್ತಾನಗಳ ಪಡೆಗಳು ಅಂತರರಾಷ್ಟ್ರೀಯ ಗಡಿಗೆ ತಮ್ಮ ಪಡೆಗಳನ್ನು ಇಂದು ವಾಪಾಸು ಕರೆಸಿಕೊಳ್ಳಬೇಕಾಗಿತ್ತಾದರೂ ಅದು ಇನ್ನೂ ಪ್ರಾರಂಭವೇ ಆಗಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ಗುರುತಿಸುವಿಕೆ ಕೆಲಸವನ್ನು ಉಭಯ ರಾಷ್ಟ್ರಗಳ ಸೇನಾ ಪ್ರತಿನಿಧಿಗಳು ಮುಗಿಸಲು ಸಾಧ್ಯವಾಗದಿರುವುದರಿಂದ ತಮ್ಮ ತಮ್ಮ ಪಡೆಗಳನ್ನು ವಾಪಾಸು ಕರೆಸಿಕೊಳ್ಳುವ ದಿನವನ್ನು ಅವು ಮತ್ತೆ ಎರಡನೆಯ ಬಾರಿಗೆ ಮುಂದಕ್ಕೆ ಹಾಕಿವೆ.
ಸಿಮ್ಲಾ ಒಪ್ಪಂದವನ್ನ ಅನುಮೋದಿಸಿದ 30 ದಿನಗಳೊಳಗೆ ಪಡೆಗಳನ್ನು ವಾಪಸು ಕರೆಸಿಕೊಳ್ಳಬೇಕಾಗಿದ್ದು, ಆ ಗಡುವು ಸೆ.4ರಂದು ಮುಗಿಯಿತು.
ಜಲ ರಕ್ಷಣೆ, ಪ್ರವಾಹ ಹತೋಟಿ ಯೋಜನೆಗಳ ಮೂಲಕ ಜನರ ಬವಣೆ ತಪ್ಪಿಸಲು ಪಾಠಕ್ ಕರೆ
ಮೈಸೂರು, ಸೆ. 15– ರಾಷ್ಟ್ರದ ಒಂದಲ್ಲ ಒಂದು ಪ್ರದೇಶ ಬರ ಇಲ್ಲವೇ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಜಲ ಸಂರಕ್ಷಣೆ ಮತ್ತು ಪ್ರವಾಹ ನಿಯಂತ್ರಣ ಯೋಜನೆಗಳ ಮೂಲಕ ಜನರ ಬವಣೆಯನ್ನು ತಪ್ಪಿಸಲು ಉಪರಾಷ್ಟ್ರಪತಿ ಶ್ರೀ ಜಿ.ಎಸ್. ಪಾಠಕ್ ಅವರು ಎಂಜಿನಿಯರುಗಳಿಗೆ ಇಂದು ಇಲ್ಲಿ ಕರೆ ನೀಡಿದರು.