ಭದ್ರಾವತಿ, ಸೆ. 19– ಭದ್ರಾವತಿಯ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಉದ್ರಿಕ್ತ ಕಾರ್ಮಿಕರ ಗುಂಪನ್ನು ಚದುರಿಸಲು ಪೊಲೀಸರು ಇಂದು ಬೆಳಿಗ್ಗೆ ಗೋಲಿಬಾರ್ ಮಾಡಿದಾಗ ಒಬ್ಬರು ಸ್ಥಳದಲ್ಲೇ ಸತ್ತು, ಮೂವರು ತೀವ್ರವಾಗಿ ಗಾಯಗೊಂಡರು.
ತುಟ್ಟಿಭತ್ಯೆ ವ್ಯತ್ಯಾಸ ಮೊತ್ತದ ತತ್ಕ್ಷಣದ ಪಾವತಿಗಾಗಿ ಒತ್ತಾಯಪಡಿಸಿ ನಿನ್ನೆ ರಾತ್ರಿ ಪ್ರಾರಂಭವಾದ ಕಾರ್ಮಿಕರ ಚಳವಳಿಯು ಇಂದು ಬೆಳಿಗ್ಗೆ ವಿಕೋಪಕ್ಕೆ ಮುಟ್ಟಿ, ಸಹಸ್ರಾರು ಕಾರ್ಮಿಕರು ಮುಖ್ಯದ್ವಾರದ ಮುಂದೆ ಸೇರಿ, ಪೊಲೀಸರು ಮತ್ತಿತರರ ಮೇಲೆ ಕಲ್ಲು ತೂರಾಟ ಆರಂಭಿಸಿದರು.
ಉಗಾಂಡಾ, ತಾಂಜಾನಿಯ ಮಧ್ಯೆ ಭೀಕರ ಯುದ್ಧ ಸಂಭವ
ಲಂಡನ್, ಸೆ. 19–ಬಂಡಾಯಗಾರರನ್ನು ಗಡಿಯಾಚೆ ತಾಂಜಾನಿಯಾದೊಳಕ್ಕೆ ಅಟ್ಟಲು ಉಗಾಂಡಾದ ಅಧ್ಯಕ್ಷ ಇದಿ ಅಮೀನ್ ಅವರು ತಮ್ಮ ಸೇನೆಗೆ ಆಜ್ಞೆಯಿತ್ತು ತಾಂಜಾನಿಯಾದ ಜತೆ ಯುದ್ಧದ ಕಿಡಿ ಹಾರಿಸಬಹುದೆಂಬ ಭೀತಿ ಇಂದು ಪ್ರಬಲವಾಗಿದೆ.
ಪದಚ್ಯುತ ಅಧ್ಯಕ್ಷ ಮಿಲ್ಟನ್ ಒಬೋಟೆ ಅವರ ಬೆಂಬಲಿಗ ಬಂಡಾಯಗಾರರು ಭಾನುವಾರ ಬೆಳಿಗ್ಗೆ ತಮ್ಮ ತಾಯ್ನಾಡನ್ನು ಪ್ರವೇಶಿಸಿದರೆಂದೂ ಎರಡು ದಿನಗಳ ಹೋರಾಟದ ನಂತರ ಪರಾಭವಗೊಂಡ ಅವರು ಗಡಿನಾಡಿಗೆ ಹಿನ್ನಡೆದಿರುವರೆಂದೂ ಉಗಾಂಡಾ ರೇಡಿಯೊ ಹೇಳಿಕೊಂಡಿದೆ.