ಪಟನಾ ಸೆ. 20– ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರ ಜೊತೆ ತಾವು ಮುಂದಿನ ತಿಂಗಳು ಶೃಂಗಸಭೆ ನಡೆಸುವ ಸಾಧ್ಯತೆಯನ್ನು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಳ್ಳಿಹಾಕಿದರು.
ಪತ್ರಿಕಾಗೋಷ್ಠಿಯೊಂದರಲ್ಲಿ ಇತ್ತೀಚೆಗೆ ಭುಟ್ಟೋ ಅವರು ಈ ಬಗೆಗೆ ಹೇಳಿರುವುದನ್ನು ಅವರ ಗಮನಕ್ಕೆ ತಂದಾಗ ‘ಪತ್ರಿಕೆಗಳಲ್ಲಿ ನಾನೂ ನೋಡಿದ್ದೇನೆ. ಕಾಶ್ಮೀರದಲ್ಲಿ ಹತೋಟಿ ರೇಖೆಯನ್ನು ಆಖೈರಾಗಿ ಗುರುತಿಸುವವರೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ’ ಎಂದು ನುಡಿದರು.
ಒತ್ತಡ ತಂತ್ರಗಳಿಗೆ ಸರ್ಕಾರ ಮಣಿಯದು: ಸಚಿವ ಕೃಷ್ಣ ಸ್ಪಷ್ಟನೆ
ಬೆಂಗಳೂರು, ಸೆ. 20– ಹಿಂಸಾಚಾರ ಮತ್ತು ಒತ್ತಡದ ತಂತ್ರಗಳಿಂದ ಬೇಡಿಕೆಗಳನ್ನು ಈಡೇರಿಸ ಬಯಸುವ ಕಾರ್ಮಿಕರ ಪ್ರವೃತ್ತಿಗೆ ಸರ್ಕಾರ ಮಣಿಯುವುದಿಲ್ಲ ಎಂದು ಕೈಗಾರಿಕಾ ಮಂತ್ರಿ ಶ್ರೀ ಎಸ್. ಎಂ.ಕೃಷ್ಣ ಅವರು ಭದ್ರಾವತಿ ಕಬ್ಬಿಣ ಕಾರ್ಖಾನೆ ಕಾರ್ಮಿಕರಿಗೆ ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕರ ಒಂದು ವರ್ಗ ಹಿಂಸಾಚಾರಕ್ಕೆ ಕೈಹಾಕಿದುದನ್ನು ಉಗ್ರವಾಗಿ ಖಂಡಿಸಿದ ಸಚಿವರು ‘ಇದರಿಂದ ಪ್ರಶ್ನೆಗಳು ಇಥ್ಯರ್ಥವಾಗುವುದಿಲ್ಲ; ಹಿಂಸಾಚಾರದ ವಿರುದ್ಧ ಸರ್ಕಾರದ ನಿಲುವು ಅತ್ಯಂತ ಬಿಗುವಾಗುವುದು’ ಎಂದಿದ್ದಾರೆ.