ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾತ್ರ ಗಿಡಮರಗಳ ಕುರಿತಾದ ಕಾಳಜಿ ಅತೀ ಕಡಿಮೆ. ಯಾರಾದರೂ ಗಿಡಮರಗಳನ್ನು ನೆಟ್ಟು ಬೆಳೆಸಲಿ, ಆದರೆ ಅದರ ನೆರಳು ಮಾತ್ರ ನಮಗಿರಲಿ ಎನ್ನುವ ಧೋರಣೆಯೇ ಎಲ್ಲೆಡೆ ತುಂಬಿದೆ. ಬೇಸಿಗೆಯಲ್ಲಿ ವಾಹನಗಳ ನಿಲುಗಡೆಗೆ ತಂಪಾದ ಮರಗಳ ನೆರಳು ಹುಡುಕುವ ನಾವು, ಅವೇ ಮರಗಳನ್ನು ಉಳಿದ ದಿನಗಳಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಜೀವನದಲ್ಲಿ ಒಂದೇ ಒಂದು ಗಿಡವನ್ನೂ ನೆಟ್ಟು ಬೆಳೆಸದ, ಈಗಾಗಲೇ ಯಾರೋ ನೆಟ್ಟಿರುವ ಸಸಿಗಳಿಗೆ ನೀರುಣಿಸದ, ಅನವಶ್ಯಕವಾಗಿ ಮರಗಳನ್ನು ಕತ್ತರಿಸುವುದನ್ನು ಪ್ರತಿಭಟಿಸದ ನಾವುಗಳು ನಮ್ಮ ವಾಹನಗಳನ್ನು ಮಾತ್ರ ನೆರಳಿನಲ್ಲಿ ನಿಲ್ಲಿಸಲು ಹೆಣಗಾಡುವುದು ವ್ಯಂಗ್ಯವಲ್ಲವೇ? ಪ್ರತೀ ಕುಟುಂಬವು ಇಂತಿಷ್ಟು ಗಿಡಮರಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಅವರಿಗೆ ಸರ್ಕಾರದ ಉಚಿತ ಸೌಕರ್ಯಗಳನ್ನು ನೀಡಲಾಗುತ್ತದೆ ಎಂಬ ಕಾನೂನು ಜಾರಿಯಾಗಬೇಕು. ಈ ದಿಸೆಯಲ್ಲಿ ಸಮುದಾಯ ಅರಣ್ಯವಾದರೂ ಬೆಳೆದರೆ ಅದರಿಂದ ಎಷ್ಟೋ ಶುದ್ಧ ಗಾಳಿ, ನೆರಳು ದೊರಕಿದಂತಾಗುತ್ತದೆ.