ಸಚಿವರ ರಾಜೀನಾಮೆ ಹಗರಣ:ಪ್ರತಿಪಕ್ಷಗಳ ಪ್ರತಿಭಟನೆ; ಸಭಾತ್ಯಾಗ
ಬೆಂಗಳೂರು, ಜ. 17– ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಎಂಟು ಮಂದಿ ಸಚಿವರ ರಾಜೀನಾಮೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಸಮಾಧಾನಕರ ಉತ್ತರ ನೀಡಲಿಲ್ಲ ಎಂದು ವಿರೋಧ ಪಕ್ಷದವರು ವಿಧಾನ ಸಭೆಯಲ್ಲಿ ಇಂದು ತೀವ್ರವಾಗಿ ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.
ಎಂಟು ಮಂದಿ ಸಚಿವರ ರಾಜೀನಾಮೆಗಳನ್ನು ಅಂಗೀಕರಿಸಲು ಮುಖ್ಯಮಂತ್ರಿಗಳು ಶಿಫಾರಸು ಮಾಡಿದ್ದರೂ ರಾಜ್ಯಪಾಲರು ಅವನ್ನು ತಕ್ಷಣ ಅಂಗೀಕರಿಸದೆ ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಒಕ್ಕೊರಲಿನಿಂದ ಆರೋಪಿಸಿದವು.
ವೀರಪ್ಪನ್ ತಂಡದ ಗುಂಡಿಗೆ ಬಲಿ
ಕೊಳ್ಳೇಗಾಲ, ಜ. 17– ಕುಖ್ಯಾತ ನರಹಂತಕ ವೀರಪ್ಪನ್ ತಂಡ ಹಠಾತ್ತಾಗಿ ಪೊಲೀಸರ ಮೇಲೆ ನಡೆಸಿದ ದಾಳಿಯಿಂದ ಕರ್ನಾಟಕ ವಿಶೇಷ ಕಾರ್ಯಾಚರಣೆ ತಂಡದ ಒಬ್ಬ ಯೋಧ ಸತ್ತಿದ್ದಾನೆ. ಇತರ ಆರು ಮಂದಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಪಡೆ ಪ್ರತಿಯಾಗಿ ನಡೆಸಿದ ದಾಳಿಗೆ ವೀರಪ್ಪನ್ ತಂಡದ ಒಬ್ಬ ಸತ್ತಿದ್ದಾನೆ.