ರಾಮಾಲಯ ಟ್ರಸ್ಟ್: ಸಂತರ ನಿರ್ಧಾರ ವಾರಾಣಸಿ, ಸೆ. 16 (ಯುಎನ್ಐ)– ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಸಲುವಾಗಿ ರಾಜಕೀಯೇತರವಾದ ‘ರಾಮ ಜನ್ಮಭೂಮಿ ರಾಮಾಲಯನ್ಯಾಸ’ ಎಂಬ ಟ್ರಸ್ಟ್ ಅನ್ನು ರಚಿಸಲು ಇಲ್ಲಿ ಇಂದು ಸೇರಿದ ಸಂತರ ಸಮ್ಮೇಳನವು ನಿರ್ಧರಿಸಿದೆ.
ಈ ಟ್ರಸ್ಟ್ ನಿರ್ಮಿಸಲು ಉದ್ದೇಶಿಸಿರುವ ಮಂದಿರದ ಕೆಲಸ ಕಾರ್ಯಗಳ ಉಸ್ತುವಾರಿ ಯನ್ನು ದ್ವಾರಕ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರಿಗೆ ವಹಿಸಲಾಯಿತು. ಕಾಂಬೋಡಿಯದ ‘ಆಂಗ್ಕೋರ್ ವಾಟ್’ ದೇವಾಲಯದ ಮಾದರಿಯಲ್ಲಿ ರಾಮ ಮಂದಿರ ನಿರ್ಮಿಸಲು ಸಮ್ಮೇಳನ ತೀರ್ಮಾನಿಸಿದೆ.
ಮುಲಾಯಂಗೆ ಬೆಂಬಲ ಪ್ರಶ್ನೆ ಕಾಂಗೈ ಆತುರದ ಕ್ರಮ ಇಲ್ಲ ನವದೆಹಲಿ, ಸೆ. 16 (ಯುಎನ್ಐ)– ಮುಲಾಯಂ ಸಿಂಗ್ ಯಾದವ್ ಅವರ ಸರ್ಕಾರಕ್ಕೆ ಬೆಂಬಲ ವಾಪಸು ಪಡೆಯುವಂತೆ ಉತ್ತರ ಪ್ರದೇಶ ಕಾಂಗೈ ಕೈಗೊಂಡಿರುವ ನಿರ್ಣಯದ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಹೈಕಮಾಂಡ್ ಅವಸರದಲ್ಲಿದ್ದಂತೆ ಕಂಡುಬರುತ್ತಿಲ್ಲ.
ಈ ಮಧ್ಯೆ, ನಿರ್ಣಯದ ಮೇಲೆ ಹೈಕಮಾಂಡ್ ಶೀಘ್ರವೇ ಕ್ರಮ ಕೈಗೊಳ್ಳುವುದು ಎಂಬ ವಿಶ್ವಾಸವನ್ನು ರಾಜ್ಯ ಘಟಕದ ಅಧ್ಯಕ್ಷರಾದ ಎನ್.ಡಿ. ತಿವಾರಿ ಅವರು ವ್ಯಕ್ತಪಡಿಸಿದ್ದಾರೆ.