ನವದೆಹಲಿ, ಏ. 26 (ಪಿಟಿಐ)– ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಒಬ್ಬ ದ್ವಿಮುಖ ವ್ಯಕ್ತಿತ್ವದ ಸಂಚುಗಾರ ಎಂದು ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಟೀಕಿಸುವುದರೊಂದಿಗೆ ಜನತಾ ದಳದೊಳಗಿನ ಆಂತರಿಕ ಕಲಹ ಉಲ್ಬಣಿಸಿತು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ದೇವೇಗೌಡರ ಕಡು ವೈರಿ ರಾಮಕೃಷ್ಣ ಹೆಗಡೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಶತಾಯಗತಾಯ ಯತ್ನಿಸುವುದಾಗಿ ಲಾಲೂ ಪಣ ತೊಟ್ಟಿರು ವುದು ಕೂಡಾ ಜನತಾದಳದಲ್ಲಿ ಮುಂದೆ ನಡೆಯುವ ವಿದ್ಯಮಾನಗಳ ಸಂಕೇತದಂತಿದೆ.
ಈ ನಡುವೆ, ‘ಮತ್ತೆ ಜನತಾದಳಕ್ಕೆ ಹಿಂತಿರುಗುವ ಪ್ರಶ್ನೆಯೇ ಇಲ್ಲ’ ಎಂದು ಲೋಕಶಕ್ತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬೆಂಗಳೂರಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಹೆಗಡೆ ಅವರು ಮರಳಿ ದಳಕ್ಕೆ ಹಿಂತಿರುಗ ಬೇಕು ಎಂದು ಜನತಾದಳದ ಕೆಲವು ಸಚಿವರು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.