2.50 ಲಕ್ಷ ರೂ. ಪ್ರಥಮ ಬಹುಮಾನದ ರಾಜ್ಯದ ಲಾಟರಿ ಬೆಂಗಳೂರು, ಸೆ. 12– ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಮೈಸೂರು ರಾಜ್ಯದ ಲಾಟರಿಯು, ಪ್ರತಿ ಮೂರು ತಿಂಗಳಿಗೊಮ್ಮೆ ನಾಲ್ವರು ಅದೃಷ್ಟವಂತರಿಗೆ ತಲಾ ಎರಡೂವರೆ ಲಕ್ಷ ರೂಪಾಯಿಗಳ ಬಹುಮಾನ ತರಲಿದೆ.
ವರ್ಷಕ್ಕೆ ನಾಲ್ಕು ಬಾರಿ ‘ಡ್ರಾ’. ಪ್ರತಿ ‘ಡ್ರಾ’ದಲ್ಲಿ ನಾಲ್ಕು ಶ್ರೇಣಿಗಳು. ತಲಾ 25 ಲಕ್ಷ ರೂಪಾಯಿಗಳ ಶ್ರೇಣಿಯಲ್ಲಿ ಬಹುಮಾನದ ರೂಪದಲ್ಲಿ ಹಂಚುವ ಹಣ ಒಟ್ಟು 7.15 ಲಕ್ಷ ರೂಪಾಯಿಗಳು.
ಈ ವಿವರಗಳನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ‘ಮೈಸೂರು ರಾಜ್ಯದ ಲಾಟರಿ ಇತರ ರಾಜ್ಯಗಳ ಲಾಟರಿಗಳಿಗಿಂತ ಹೆಚ್ಚು ಆಕರ್ಷಕ’ ಎಂದರು.
ಎಸ್ಸೆನ್ ಆಸ್ತಿ ಇಷ್ಟೇ... ಡೆಹ್ರಾಡೂನ್, ಸೆ. 12– ತಮಗೆ ಇರುವ ಆಸ್ತಿ ಎಂದರೆ ಬ್ಯಾಂಕಿನಲ್ಲಿ ಸ್ವಲ್ಪ ಹಣ ಮತ್ತು ಒಂದು ಚಿಕ್ಕ ಮನೆ ಮಾತ್ರ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ತಮ್ಮನ್ನು ಟೀಕಿಸುವವರಿಗೆ ಇಂದು ತಿಳಿಸಿದರು.
ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮನೆಯನ್ನು ತಾವು ವಕೀಲಿ ವೃತ್ತಿ ಮಾಡುತ್ತಿದ್ದಾಗ ಕಟ್ಟಿಸಿಕೊಂಡಿದ್ದಾಗಿಯೂ ತಿಳಿಸಿದರು.
ಯಾರಾದರೂ 50 ಸಾವಿರ ರೂ. ಕೊಡಲು ಮುಂದೆ ಬಂದರೆ ಎಲ್ಲವನ್ನೂ ಬಿಟ್ಟುಕೊಡುವುದಾಗಿ ಅವರು ಹೇಳಿದರು.
‘ಎಲ್ಲವನ್ನೂ’ ಎನ್ನುವುದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ಸೇರಿದೆಯೇ ಎಂದು ವಿನೋದದಿಂದ ಪ್ರಶ್ನಿಸಿದಾಗ ‘ಇದು ನನ್ನ ಕೈಯಲ್ಲಿಲ್ಲ’ ಎಂದರು ನಿಜಲಿಂಗಪ್ಪ.