ನವದೆಹಲಿ, ಅ. 21– ಕೃಷಿ ಸಂಪತ್ತಿನ ಮೂಲ ಮೌಲ್ಯದ ಮೇಲೆ ಕೇಂದ್ರ ಸರ್ಕಾರ ತೆರಿಗೆಯನ್ನು ವಿಧಿಸಬಹುದೆಂಬ 1969ರ ಸಂಪತ್ ತೆರಿಗೆ ತಿದ್ದುಪಡಿ ಶಾಸನದ ರಾಜ್ಯಾಂಗ ಕ್ರಮಬದ್ಧತೆಯನ್ನು ಸುಪ್ರೀಂ ಕೋರ್ಟು ಇಂದು ಎತ್ತಿ ಹಿಡಿಯಿತು.
ಶಾಸನವು ರಾಜ್ಯಾಂಗದ ಅಧಿಕಾರಕ್ಕೆ ಮೀರಿದ್ದೆಂಬ ಪಂಜಾಬ್ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ ಅಪೀಲನ್ನು ನ್ಯಾಯಾಲಯ ಪುರಸ್ಕರಿಸಿತು.
ಭೂಮಿ ಮತ್ತು ಬೇಸಾಯಗಳು ರಾಜ್ಯದ ಅಧಿಕಾರದಲ್ಲಿ ಬರುವ ವಿಷಯಗಳಾದ್ದರಿಂದ ಕೃಷಿ ಸಂಪತ್ ತೆರಿಗೆಯ ಬಗ್ಗೆ ಶಾಸನ ಮಾಡಲು ಪಾರ್ಲಿಮೆಂಟಿಗೆ ಅಧಿಕಾರವಿಲ್ಲವೆಂದು ಪಂಜಾಬಿನ ಭೂಮಾಲೀಕರೊಬ್ಬರಾದ ಎಚ್.ಎಸ್. ಧಿಲ್ಲೋನರು ಶಾಸನದ ಸಿಂಧುತ್ವನ್ನು ಪ್ರಶ್ನಿಸಿದರು.
ಎರಡನೇ ಎಚ್.ಎಂ.ಟಿ. ಗಡಿಯಾರ ಕಾರ್ಖಾನೆಗೆ ಶಂಕು ಸ್ಥಾಪನೆ
ಬೆಂಗಳೂರು, ಅ. 21– ನಿರುದ್ಯೋಗ ತರುಣರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶ ದೊರೆಯುವಂತಾಗಲು ಸರ್ಕಾರಿ ಕ್ಷೇತ್ರಗಳ ಉದ್ದಿಮೆಗಳು ತಮ್ಮ ಕೈಗಾರಿಕೆಗಳನ್ನು ವಿಸ್ತರಿಸುವ ಯೋಜನೆಗಳಿಗೆ ಸಾಕಷ್ಟು ಹಣವನ್ನು ಒದಗಿಸುವುದು ಉತ್ತಮ ಎಂದು ಎಚ್.ಎಂ.ಟಿ. ಅಧ್ಯಕ್ಷ ಡಾ.ಎಸ್.ಎಂ. ಪಾಟೀಲ್ ಅವರು ಇಂದು ಇಲ್ಲಿ ತಿಳಿಸಿದರು.
ನಾಲ್ಕು ಕೋಟಿ ರೂ.ವಿನ ಎರಡನೇ ಗಡಿಯಾರ ಕಾರ್ಖಾನೆಯ ಶಂಕುಸ್ಥಾಪನೆ ನೆರವೇರಿಸಿದ ಡಾ. ಪಾಟೀಲ್ ಅವರು, ಕಾರ್ಖಾನೆಯ ಉತ್ಪಾದನೆಯಿಂದ ಬರುವ ಲಾಭವನ್ನು ಕಾರ್ಮಿಕರೇ ಅನುಭವಿಸ ಬೇಕೆಂಬ ಸ್ವಾರ್ಥ ಬಾವನೆಯನ್ನು ಬಿಟ್ಟು ಬಿಡಬೇಕೆಂದು ಹೇಳಿದರು.
‘ನಗರ ಕಾರ್ಪೊರೇಷನ್ ಕಮಿಷನರಿಂದ ಕಾನೂನು ತೀರ್ಮಾನಗಳ ಉಲ್ಲಂಘನೆ’
ಬೆಂಗಳೂರು, ಅ. 21– ನಗರ ಕಾರ್ಪೊರೇಷ ನ್ನಿನ ಕಮಿಷನರ್ ಅವರು ಕಾರ್ಪೊರೇಷನ್ನಿನ ಕಾನೂನು ಮತ್ತು ತೀರ್ಮಾನಗಳನ್ನು ಉಲ್ಲಂಘಿಸಿ ನಡೆದಿದ್ದಾರೆಂದು ಮೇಯರ್ ಶ್ರೀ ಜೆ.ಲಿಂಗಯ್ಯ ಅವರು ಇಂದು ಇಲ್ಲಿ ಆರೋಪಿಸಿದರು.
‘ಕಮಿಷನರ್ ಅವರು ಸ್ಥಾಯಿ ಸಮಿತಿ ಗಳ ಸಭೆಗಳ ಹಾಜರಾಗುವುದಿಲ್ಲ. ನಗರ ಪರಿಶೀಲನೆಗೆ ಬನ್ನಿರೆಂದು ಕರೆದರೆ ಬರುವುದಿಲ್ಲ. ಸ್ಥಾಯಿ ಸಮಿತಿಗಳ ಹಾಗೂ ಕಾರ್ಪೊರೇಷನ್ ಸಭೆ ಕೈಗೊಳ್ಳುವ ತೀರ್ಮಾನಗಳನ್ನು ಕಾರ್ಯಗತ ಮಾಡದೇ ಕಡೆಗಣಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
‘ಅವರ ಮನೋಭಾವ ಖಂಡನಾರ್ಹ’ ಎಂದು ಮೇಯರ್ ಅವರು ಪತ್ರಿಕಾವರದಿ ಗಾರರಿಗೆ ತಿಳಿಸಿದರು.