ವಿರೋಧಿಗಳ ಪ್ರಯತ್ನಕ್ಕೆ ಜಗ್ಗುವುದಿಲ್ಲ: ಮುಖ್ಯಮಂತ್ರಿ ಸ್ಪಷ್ಟನೆ
ಬೆಂಗಳೂರು, ಜ. 28– 1972ರವರೆಗೆ ಭದ್ರವಾದ ಸರ್ಕಾರ ನೀಡಬೇಕೆಂಬ ‘ಜನತೆಯ ಆಜ್ಞೆ’ಯಿಂದ ‘ಏನು ಮಾಡಿದರೂ ಜಗ್ಗುವುದಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ವಿರೋಧ ಪಕ್ಷಗಳಿಗೆ ಸ್ಪಷ್ಟಪಡಿಸಿದರು.
ರಾತ್ರಿ ವಿಧಾನ ಸಭೆಯಲ್ಲಿ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರವಿತ್ತ ಮುಖ್ಯಮಂತ್ರಿಗಳು, ಪ್ರಧಾನಿ ಕಾಂಗ್ರೆಸ್ ಪಕ್ಷವನ್ನು ‘ನಮ್ಮ ಹೆಜ್ಜೆ ಎಣಿಸೋರು ಅಂತ ನಮಗೆ ಗೊತ್ತಿದೆ’ ಎಂದು ಹೇಳಿದರು.
ಅಧಿಕಾರಿಗಳ ಸರ್ವಾಧಿಕಾರ ಪ್ರವೃತ್ತಿ ಕುರಿತು ಕಟ್ಟೀಮನಿ ಟೀಕೆ
ಬೆಂಗಳೂರು, ಜ. 28– ‘ಇದು ಕಾಂಗ್ರೆಸ್ ಸರ್ಕಾರದಂತೆ ಕಾಣುತ್ತಿಲ್ಲ. ಅಧಿಕಾರಿಗಳು ಪುಟ್ಟ ಪುಟ್ಟ ಸರ್ವಾಧಿಕಾರಿಗಳಾಗಿದ್ದಾರೆ’ ಎಂದು ಸಂಸ್ಥಾ ಕಾಂಗ್ರೆಸ್ ಸದಸ್ಯ ಶ್ರೀ ಬಸವರಾಜ ಕಟ್ಟೀಮನಿಯವರು ಇಂದು ಮೇಲ್ಮನೆಯಲ್ಲಿ ಟೀಕಿಸಿದರು.
ರಾಜ್ಯಪಾಲರಿಗೆ ವಂದನೆಯನ್ನರ್ಪಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಶ್ರೀ ಕಟ್ಟೀಮನಿಯವರು ‘ಇದು ಪ್ರಜಾಪ್ರಭುತ್ವವೇ ಅಲ್ಲ, ಜನ ಸಾಮಾನ್ಯನಿಗೆ ಕವಡೆ ಕಿಮ್ಮತ್ತೂ ಇಲ್ಲ’ ಎಂದು ಅಭಿಪ್ರಾಯಪಟ್ಟರು.
ಮಂಚನಬೆಲೆ ಯೋಜನೆಗೆ ಹಣದ ಹೊಣೆ ರಾಜ್ಯ ಸರ್ಕಾರದ್ದೇ
ಬೆಂಗಳೂರು, ಜ. 28– ‘ಮಂಚನಬೆಲೆ ಯೋಜನೆಯನ್ನು ಕೇಂದ್ರ ಸರ್ಕಾರದ ನೆರವು ನಂಬಿ ಪ್ರಾರಂಭಿಸಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿ ಅದಕ್ಕೆ ಅಗತ್ಯವಾದ ಹಣವನ್ನು ರಾಜ್ಯ ಸರ್ಕಾರವೇ ಒದಗಿಸುವುದೆಂದರು.