ಉದ್ಯಮಿ ಆನಂದ್ ಮಹೀಂದ್ರ ಅವರು ಬೆಂಗಳೂರಿಗೆ ‘ಟೆಕ್ಹಳ್ಳಿ’ ಎಂಬ ಹೊಸ ಹೆಸರನ್ನು ನೀಡಲು
ಮುಂದಾಗಿರುವುದನ್ನು ಎಸ್.ಆರ್.ವಿಜಯಶಂಕರ ಅವರು ಸರಿಯಾಗಿಯೇ ಪ್ರಶ್ನಿಸಿದ್ದಾರೆ (ಸಂಗತ, ಜೂನ್ 12). ‘ಸುಲಿದ ಬಾಳೆಯ ಹಣ್ಣಿನಂದದಿ... ಸುಲಭವಾಗಿರ್ಪ ಲಲಿತವಹ ಕನ್ನಡ’ ಎಂದು ಕನ್ನಡ ಭಾಷೆಯನ್ನು ಕವಿ ಮಹಾಲಿಂಗರಂಗರು ವರ್ಣಿಸಿದ್ದರು. ಆನಂದ್ ಸೂಚಿಸಿರುವ ‘ಟೆಕ್ಹಳ್ಳಿ’ ಎಂಬ ಹೊಸ ಹೆಸರು ಸುಲಭವಾಗಿಯೂ ಇಲ್ಲ, ಸುಲಲಿತವಾಗಿಯೂ ಇಲ್ಲ, ಸುಂದರವಾಗಿಯೂ ಇಲ್ಲ. ಈ ಕಳಾಹೀನ ಹೆಸರು ಬೆಂಗಳೂರಿನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವುದಕ್ಕಿಂತ ಹಾಳು ಮಾಡುವಂತಿದೆ. ಒಂದು ವೇಳೆ ನಿಜವಾಗಿಯೂ ಬೆಂಗಳೂರಿಗೆ ದೇಸಿ ಸಂಸ್ಕೃತಿಗೆ ಹೊಂದುವಂತಹ ಹೆಸರನ್ನು ಮರುನಾಮಕರಣ ಮಾಡಬೇಕಿದ್ದರೆ, ಆ ಹೆಸರು ಕನ್ನಡದ ಕವಿಗಳು, ಸಾಹಿತಿಗಳು ಸೂಚಿಸುವ ಹೆಸರಾಗಿರಬೇಕು. ಆಗ ಕನ್ನಡದ ಗೌರವ ಉಳಿಯುವುದರ ಜೊತೆಗೆ ‘ಟೆಕ್ಹಳ್ಳಿ’ ಎಂಬಂತಹ ವಿಚಿತ್ರ ಪದದ ಜನನವಾಗುವುದಿಲ್ಲ.