ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಕಡಿದಾದ ತಿರುವುಗಳಲ್ಲಿ ಆಗಾಗ ಅವಘಡಗಳು ಸಂಭವಿಸುತ್ತಿವೆ. ಹತ್ತು ಟನ್ಗಳಿಗಿಂತಲೂ ಹೆಚ್ಚು ಭಾರ ಹೊತ್ತ ಘನವಾಹನ ಸಂಚಾರವನ್ನು ರಾತ್ರಿ ವೇಳೆ ಸಂಪೂರ್ಣ ನಿಷೇಧಿಸಬಾರದೇ? ಒಣಗಿ ಬಾಗಿದ ಮರಗಳ ರೆಂಬೆಕೊಂಬೆ ಕಡಿಯಬೇಕು. ಆಗುಂಬೆ ಘಾಟಿ ರಸ್ತೆಯನ್ನು ಸುರಕ್ಷಿತಗೊಳಿಸಲು ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕು. ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೂ ಈ ರಸ್ತೆಯನ್ನು ಪರಿಶೀಲಿಸಿ ಸೂಕ್ಷ್ಮ ಪರಿಸರ, ಅರಣ್ಯ ಪ್ರದೇಶದ ರಕ್ಷಣೆಗೆ ಕ್ರಮ ಜರುಗಿಸಲಿ. ಶಾಶ್ವತ, ಸುರಕ್ಷಿತ ರಸ್ತೆ ನಿರ್ಮಾಣ–ನಿರ್ವಹಣೆ ಇಂದಿನ ಅಗತ್ಯ.