ರೈತ ಚಳವಳಿ ಕುರಿತು ಬರಹಗಾರರು ಮೌನ ವಹಿಸಿರುವುದೇಕೆ ಎಂದು ಪುರುಷೋತ್ತಮ ಬಿಳಿಮಲೆ ಅವರು ಪ್ರಶ್ನಿಸಿದ್ದಕ್ಕೆ ಆರ್.ಲಕ್ಷ್ಮಿನಾರಾಯಣ ಅವರ ಒಂದು ದೃಷ್ಟಿಕೋನದ ಪ್ರತಿಕ್ರಿಯೆ ಪ್ರಕಟವಾಗಿದೆ. ಬಿಳಿಮಲೆ ಅವರ ಪ್ರಶ್ನೆಗೆ ಇನ್ನೊಂದು ದೃಷ್ಟಿಕೋನದಿಂದಲೂ ಪ್ರತಿಕ್ರಿಯಿಸಬಹುದಾಗಿದೆ. ರೈತ ಚಳವಳಿ ಕುರಿತು ಬರಹಗಾರರು ಮೌನ ವಹಿಸಿದ್ದಾರೆ ಎಂಬುದೇ ತಪ್ಪು ತಿಳಿವಳಿಕೆ. ರೈತ ಚಳವಳಿಯಷ್ಟೇ ಅಲ್ಲ, ಎಲ್ಲ ಜನವಿರೋಧಿ ಕ್ರಮಗಳ ಕುರಿತು ಬರಹಗಾರರಾದ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಕುಂ.ವೀರಭದ್ರಪ್ಪ, ಕೆ.ಮರುಳಸಿದ್ಧಪ್ಪ, ಜಿ.ಕೆ.ಗೋವಿಂದರಾವ್, ಕೆ.ಶರೀಫಾ, ಸುಕನ್ಯಾ, ಸಿದ್ಧನಗೌಡ ಪಾಟೀಲ್, ಬಸವರಾಜ ಸಬರದ, ಬಂಜಗೆರೆ ಜಯಪ್ರಕಾಶ್ ಮುಂತಾದ ಹಿರಿಯರಲ್ಲದೆ ಅನೇಕ ಯುವ ಬರಹಗಾರರು ಪ್ರತಿಕ್ರಿಯಿಸುತ್ತಲೇ ಇದ್ದಾರೆ. ಕೆಲವರು ನೇರವಾಗಿ ಚಳವಳಿಯಲ್ಲೂ ಭಾಗವಹಿಸಿದ್ದಾರೆ. ಎಲ್ಲ ಬರಹಗಾರರನ್ನೂ ಸಾಮಾನ್ಯೀಕರಿಸಿ ಮೌನ ವಹಿಸಿದ್ದಾರೆಂದು ಟೀಕಿಸುವುದರಿಂದ ಕ್ರಿಯಾಶೀಲ ಬರಹಗಾರರಿಗೆ ಅವಮಾನ ಮಾಡಿದಂತಾಗುತ್ತದೆ.