ಇತ್ತೀಚೆಗೆ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿನ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಇದ್ದ ತಪ್ಪುಗಳನ್ನು ಪತ್ರಿಕಾ ವರದಿಗಳ ಮೂಲಕ ತಿಳಿದಾಗ, ಬೇವಿನ ಬೀಜ ಬಿತ್ತಿ ಮಾವಿನ ಫಲ ಬೇಡಿದರೆ ಹೇಗೆ ಎನಿಸಿತು. ಇದು ಕಹಿಯಾದರೂ ಸತ್ಯ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕೂಡ ಕನ್ನಡ ಭಾಷಾ ವಿಷಯವನ್ನು ತಾತ್ಸಾರವಾಗಿ ನೋಡಲಾಗುತ್ತಿದೆ. ಜೊತೆಗೆ ಶಾಲಾ ಹಂತಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಗಣಿತ, ವಿಜ್ಞಾನ, ಸಮಾಜವಿಜ್ಞಾನವನ್ನು ಬೋಧಿಸುವ ಶಿಕ್ಷಕರು ಕನ್ನಡ ಭಾಷಾ ವಿಷಯವನ್ನು ಬೋಧಿಸುತ್ತಾರೆ ಹಾಗೂ ಖಾಸಗಿ ಶಾಲೆಗಳು ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸಿಕೊಳ್ಳದೆ ಇಂಗ್ಲಿಷ್ ಹಾಗೂ ವಿಜ್ಞಾನ ಶಿಕ್ಷಕರೇ ಕನ್ನಡ ಬೋಧಿಸುವಂತೆ ಮಾಡುತ್ತವೆ.