ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಗೆ ಮಣೆ

ಹಾಲಿ ಶಾಸಕರನ್ನು ಹಿಮ್ಮೆಟ್ಟಿಸಿ ಟಿಕೆಟ್‌ ಪಡೆದು ಸಂಚಲನ ಮೂಡಿಸಿದ ಎ.ಎಲ್‌.ಪುಷ್ಪಾ
Last Updated 16 ಏಪ್ರಿಲ್ 2018, 7:23 IST
ಅಕ್ಷರ ಗಾತ್ರ

ಜಗಳೂರು: ಹಾಲಿ ಶಾಸಕ ಎಚ್.ಪಿ. ರಾಜೇಶ್‌ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎ.ಎಲ್‌. ಪುಷ್ಪಾ ಅವರಿಗೆ ಟಿಕೆಟ್‌ ಸಿಕ್ಕಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ವೃತ್ತಿ ತರಬೇತಿ ಮತ್ತು ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಯಾಗಿ ಕಾರ್ಯನಿರ್ವಹಿಸಿದ ಪುಷ್ಪಾ, ತೆರೆಮರೆಯಲ್ಲಿ ಹೈಕಮಾಂಡ್‌ ಗಮನ ಸೆಳೆದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ರಾಜಕೀಯ ವಲಯದಲ್ಲಿ ಅಷ್ಟೇನೂ ಖ್ಯಾತನಾಮರಲ್ಲದ ಪುಷ್ಪಾ ಲಕ್ಷ್ಮಣಸ್ವಾಮಿ ಇದೇ ಮೊದಲ ಬಾರಿ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವೀಧರರಾಗಿದ್ದು, ಉಪನ್ಯಾಸಕಿ →ಆಗಿರುವ ಪುಷ್ಪಾ ಕೇವಲ 10 ವರ್ಷಗಳ ಹಿಂದಷ್ಟೇ →ರಾಜಕೀಯ ಕ್ಷೆತ್ರಕ್ಕೆ ಕಾಲಿಟ್ಟಿದ್ದರು.

ಕಾಂಗ್ರೆಸ್‌ನಲ್ಲಿ →ವೇಗವಾಗಿ ಬೆಳೆ ಯುವ → ಮೂಲಕ ಜಗಳೂರಿನ ಕಾಂಗ್ರೆಸ್‌ನ ಇತಿಹಾಸದಲ್ಲೇ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಮಹಿಳಾ ಆಯೋಗದ ಸದಸ್ಯರಾಗಿ, ರಾಜ್ಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷೆ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿದ್ದು, ಕಳೆದ ವರ್ಷ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡುವ ಮೂಲಕ ಸಿ.ಎಂ. ಸಿದ್ದರಾಮಯ್ಯ ಅವರ ಮೆಚ್ಚುಗೆಗೆ ಕಾರಣರಾಗಿ ಗಮನಸೆಳೆದಿದ್ದರು.

ಜಯಸಿಂಹ ಗಾಡ್‌ಫಾದರ್‌: ಮುಖಂಡರಾದ ಅಸಗೋಡು ಜಯಸಿಂಹ ಅವರ ಬೆಂಬಲದ ಪರಿಣಾಮ ಪುಷ್ಪಾಗೆ ಟಿಕೆಟ್‌ ಪಡೆಯಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಬುಡಕಟ್ಟು ಸಮುದಾಯದ ರಾಜ್ಯದ ಏಕೈಕ ಮಹಿಳಾ ಆಕಾಂಕ್ಷಿ ಆಗಿರುವುದು ಸಹ ಹೈಕಮಾಂಡ್‌ ಮಟ್ಟದಲ್ಲಿ ಗಮನ ಸೆಳೆಯಲು ಕಾರಣವಾಗಿದೆ.

ಪುಷ್ಪಾ ಅವರು ತಾಲ್ಲೂಕಿನ ಮಾದೇಮುತ್ತೇನಹಳ್ಳಿ ಗ್ರಾಮದ ಶಿಕ್ಷಕ ದಂಪತಿ ಎ. ಲಿಂಗಪ್ಪ ಹಾಗೂ ಆರ್‌.ಟಿ. ಇಂದಿರಮ್ಮ ಅವರ ಪುತ್ರಿ. ಅವರ ಪತಿ ಲಕ್ಷ್ಮಣಸ್ವಾಮಿ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾಗಿದ್ದಾರೆ.

‘ಕ್ರಿಯಾಶೀಲ ವ್ಯಕ್ತಿತ್ವವುಳ್ಳವರು. ಬುಡಕಟ್ಟು ಮ್ಯಾಸಬೇಡ ಸಮುದಾಯದ ಪುಷ್ಪಾ ಕಾಂಗ್ರೆಸ್‌ನ ಹೆಮ್ಮೆಯ ನಾಯಕಿಯಾಗಿ ದೊಡ್ಡ ಮಟ್ಟದಲ್ಲಿ ಬೆಳೆಯುವ ಅರ್ಹತೆ ಹೊಂದಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜೇಶ್‌ಗೆ ಟಿಕೆಟ್‌ ಕೈತಪ್ಪಿದ್ದೇಕೆ?

ಕಾಂಗ್ರೆಸ್‌ನಿಂದ ನಡೆಸಿದ್ದ ಸಮೀಕ್ಷೆಯಲ್ಲಿ ಶಾಸಕ ರಾಜೇಶ್‌ ಅವರ ವಿರುದ್ಧವಾದ ಅಭಿಪ್ರಾಯ ವ್ಯಕ್ತವಾಗಿತ್ತು ಎನ್ನಲಾಗಿದೆ. ಅಲ್ಲದೇ ಘಟನೆಯೊಂದರ ಹಿನ್ನೆಲೆಯಲ್ಲಿ ಮುಖಂಡ ಅಸಗೋಡು ಜಯಸಿಂಹ ಅವರೊಂದಿಗಿನ ಮನಸ್ತಾಪ ಉಂಟಾಗಿತ್ತು. ಪಕ್ಷದಲ್ಲಿ ಪ್ರಭಾವಿಯಾಗಿರುವ ಜಯಸಿಂಹ ಅವರನ್ನು ಎದುರು ಹಾಕಿಕೊಂಡ ಪರಿಣಾಮ ರಾಜೇಶ್‌ ಟಿಕೆಟ್‌ ವಂಚಿತರಾಗಿದ್ದಾರೆ ಎಂದು ತಾಲ್ಲೂಕಿನಲ್ಲಿ ಚರ್ಚೆಯಾಗುತ್ತಿದೆ.

–ಡಿ.ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT