ಆದರೆ, ಈ ನೀತಿಯನ್ನು ರೈತರು, ಕಾರ್ಮಿಕರು, ಜನಸಾಮಾನ್ಯರ ವಿಷಯದಲ್ಲಿ ಅನ್ವಯ ಮಾಡುವುದಿಲ್ಲವೇಕೆ? ಮೊದಲನೆಯದಾಗಿ, ಬ್ಯಾಂಕುಗಳು ಇವರಿಗೆ ಸಾಲ ಕೊಡಲು ಮುಂದೆ ಬರುವುದಿಲ್ಲ. ಕೊಟ್ಟರೂ ಅದನ್ನು ದೊಡ್ಡದಾಗಿ ಚಿತ್ರಿಸುತ್ತವೆ. ಸಾಲಕಟ್ಟುವುದು ತಡವಾದರೆ ಮೇಲಿಂದ ಮೇಲೆ ನೋಟಿಸ್ ಜಾರಿ ಮಾಡುತ್ತವೆ. ಸಾಲ ಕಟ್ಟದಿದ್ದಾಗ ಆಸ್ತಿ, ಮನೆ ಜಪ್ತಿ ಮಾಡಲಾಗುತ್ತದೆ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುವಲ್ಲಿ ಇಂತಹ ಕಾರಣಗಳೂ ಸೇರಿವೆ. ಆದರೆ ಬ್ಯಾಂಕುಗಳಿಂದ ಸಾಲ ಪಡೆದ ಬಂಡವಾಳಿಗರು ದೇಶ ಬಿಟ್ಟು ಓಡಿಹೋಗಿದ್ದಾರೆಯೇ ಹೊರತು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇಲ್ಲ. ಸರ್ಕಾರ ಮತ್ತು ಬ್ಯಾಂಕ್ಗಳ ಈ ಇಬ್ಬಗೆ ನೀತಿ ‘ರೈತ ಈ ದೇಶದ ಬೆನ್ನೆಲುಬು’ ಎನ್ನುವ ಮಾತನ್ನು ಅಣಕಿಸುವಂತಿದೆ.