ಮಹಾಪುರುಷರಿಗೆ ಅವಮಾನ ಮಾಡುವುದು ಎಂತಹ ಸಂಸ್ಕೃತಿ? ಕನ್ನಡದ ಧ್ವಜ ಸುಡುವುದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ, ಕನ್ನಡ ನಾಡಿನಲ್ಲಿ ಮಹಾರಾಷ್ಟ್ರಕ್ಕೆ ಜೈಕಾರ ಕೂಗುವುದು... ಇಂತಹ ಕುಚೇಷ್ಟೆಗಳಿಗೆ ಕೊನೆ ಇಲ್ಲವೇ? ಈ ನೆಲದ ಅನ್ನ ತಿಂದು, ಇಲ್ಲಿನ ಯೋಜನೆಗಳ ಫಲಾನುಭವಿಗಳಾಗಿದ್ದೂ ಭಾಷೆಯ ಹೆಸರಿನಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮುಖಂಡರ ಉಪಟಳಕ್ಕೆ ಶಾಶ್ವತವಾಗಿ ತಡೆ ಒಡ್ಡಬೇಕಾಗಿದೆ. ಮರಾಠಿ ಭಾಷಿಕರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇದ್ದಾರೆ. ಅವರು ಸ್ಥಳೀಯರೊಂದಿಗೆ ಅನ್ಯೋನ್ಯವಾಗಿ ಬೆರೆತು ಬಾಳುತ್ತಿದ್ದಾರೆ. ಆದರೆ ಬೆಳಗಾವಿಯ ಭಾಗದಲ್ಲಿ ಕೆಲವು ಮುಖಂಡರು ಭಾಷೆಯ ಹೆಸರಿನಲ್ಲಿ ಮುಗ್ಧರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಖಂಡನೀಯ.