ಸರ್ಕಾರವು ಬೆಳಗಾವಿಗೆ ಬದಲು ಬೆಂಗಳೂರಿನಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿರುವುದು ಯಾವ ಕಾರಣಕ್ಕಾಗಿ? ಉತ್ತರ ಕರ್ನಾಟಕ ಎಂಬ ಮಾಮೂಲಿ ನಿರ್ಲಕ್ಷ್ಯ ಧೋರಣೆಯಿಂದಲೋ ಅಥವಾ ಪ್ರವಾಹ ಸಂತ್ರಸ್ತ ರೈತರ ಪ್ರತಿಭಟನೆ ಎದುರಾಗಬಹುದೆಂಬ ಕಾರಣಕ್ಕೋ ಎಂಬುದು ತಿಳಿಯುತ್ತಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಬೆಳಗಾವಿಯಲ್ಲಿ ಸುವರ್ಣಸೌಧವನ್ನು ನಿರ್ಮಿಸಿದ ಸರ್ಕಾರವೇ ಇಲ್ಲಿ ಅಧಿವೇಶನ ನಡೆಸದಿದ್ದರೆ, ಈ ಬಿಳಿ ಆನೆಯನ್ನು ಇಟ್ಟುಕೊಂಡು ಬೆಳಗಾವಿಗೆ ಏನು ಪ್ರಯೋಜನ? ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಲಿ. ಪ್ರವಾಹದಿಂದ ನೊಂದಿರುವ ಜನರ ನೋವಿಗೆ ಸರ್ಕಾರ ಸ್ಪಂದಿಸಲಿ. ಕೂಡಲೇ ಅವರಿಗೆ ಪರಿಹಾರ ದೊರಕಿಸಿಕೊಡಲಿ.