ದೇಶದ ಒಂದಲ್ಲ ಒಂದು ಕಡೆ ತೆರೆದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರ್ಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಹಲವು ಬಾರಿ ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇದೆ.
ಇಂತಹ ಪ್ರತೀ ಘಟನೆ ನಡೆದಾಗಲೂ ಸರ್ಕಾರದ ವಿರುದ್ಧ ಜನ ದನಿ ಎತ್ತುತ್ತಾರೆ. ಆಗ ಸರ್ಕಾರವು ಕೊಳವೆಬಾವಿಗಳಿಗೆ ಸಂಬಂಧಿಸಿದಂತೆ ಈಗ ಇರುವುದಕ್ಕಿಂತ ಇನ್ನೂ ಕಠಿಣ ನೀತಿ ರೂಪಿಸುವುದಾಗಿ ಹೇಳುತ್ತದೆ. ಆದರೆ ಈವರೆಗೆ ಅಂತಹ ಯಾವ ನೀತಿಯೂ ಪರಿಣಾಮಕಾರಿಯಾಗಿ ಜಾರಿಗೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಅದನ್ನು ತಡೆಯಲು ಇಚ್ಛಾಶಕ್ತಿ ಬೇಕು.