ಅಂತೂ ಸಂಪುಟಕ್ಕೆ 17 ಮಂತ್ರಿಗಳನ್ನು ತೆಗೆದುಕೊಳ್ಳಲು ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿಸಿದರು, ಆ ಮಂತ್ರಿಗಳು ಯಾರು ಎನ್ನುವುದನ್ನೂ ವರಿಷ್ಠರೇ ನಿರ್ಧರಿಸಿದರು! ಎಂದರೆ, ರಾಜ್ಯದ ಮುಖ್ಯಮಂತ್ರಿ ಕೇವಲ ಯಾರೋ ಆಡಿಸುವ ಸೂತ್ರದ ಗೊಂಬೆ ಎಂದಾಯಿತು. ಬೇರೆ ಪಕ್ಷಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುವುದು, ಆತ ಮುಖ್ಯಮಂತ್ರಿ ಆಗುವುದು ಮತ್ತು ತನ್ನ ಸಹೋದ್ಯೋಗಿ ಮಂತ್ರಿಗಳನ್ನು ಆಯ್ಕೆ ಮಾಡುವುದು- ಇದು ಅನುಸರಿಸಬೇಕಾದ ಕ್ರಮ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಹೈಕಮಾಂಡ್ ಎಂಬ ಶಕ್ತಿಕೇಂದ್ರ ಇರುತ್ತದೆ. ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುವುದೂ ಶಕ್ತಿಕೇಂದ್ರವೇ. ಹೀಗಿರುವಲ್ಲಿ ರಾಜ್ಯದಲ್ಲಿ ಮಂತ್ರಿಪದವಿಯ ಆಸೆ ಹೊತ್ತ ಅನೇಕರಿಗೆ ಈಗ ನಿರಾಸೆ. ತಮಗೆ ಅನ್ಯಾಯವಾಗಿದೆಯೆಂದು ಬಿಜೆಪಿಯ ಕೆಲವು ಶಾಸಕರು ಅಲವತ್ತುಕೊಂಡಿದ್ದಾರೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇವೆ, ಆದಾಗ್ಯೂ ತಮ್ಮನ್ನು ಮಂತ್ರಿ ಮಾಡದೆ ಅನ್ಯಾಯ ಎಸಗಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ.