ಜಾತಿವಾರು ಸಮೀಕ್ಷೆಯ ಅಂಕಿಅಂಶ ಬಹಿರಂಗಪಡಿಸಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯು ವಾಸ್ತವಾಂಶವನ್ನು ಮರೆಮಾಚುವಂತಿದೆ.
2013ರ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಕಾಂಗ್ರೆಸ್ಗೆ ಬಹುಮತ ದೊರೆತು ತಾವು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಜಾತಿ ಗಣತಿಗೆ ಚಾಲನೆ ನೀಡಿ, ಅವಕಾಶ ವಂಚಿತರಿಗೆ ವೈಜ್ಞಾನಿಕ ಮೀಸಲಾತಿ ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅದೇ ರೀತಿ ಮುಖ್ಯಮಂತ್ರಿಯಾದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ 2015ರಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಯಿತು.
ಜಾತಿ ಗಣತಿ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು 2015ರ ನವೆಂಬರ್ನಲ್ಲೇ ಹೈಕೋರ್ಟ್ ವಜಾಗೊಳಿಸಿ, ಸಮೀಕ್ಷೆ ಪ್ರಕಟಣೆಗೆ ಹಸಿರು ನಿಶಾನೆ ತೋರಿಸಿದೆ. ಆದರೆ ಸಿದ್ದರಾಮಯ್ಯನವರು ಬಲಿಷ್ಠ ಜಾತಿಗಳಿಗೆ ಹೆದರಿ,ಆಯೋಗದ ವರದಿಯನ್ನು ಕತ್ತಲಲ್ಲಿಟ್ಟು ಅದು ಪ್ರಕಟವಾಗದಂತೆ ನೋಡಿಕೊಂಡರು.
ಆಯೋಗವು ಕೇವಲ ಹಿಂದುಳಿದ ಜಾತಿಗಳಲ್ಲದೆ ಎಲ್ಲಾ ಜಾತಿಗಳ ಸೌಲಭ್ಯ ವಂಚಿತರನ್ನೂ ಗುರುತಿಸುವ ಅಂಕಿ ಅಂಶವನ್ನು ಸಂಗ್ರಹಿಸಿತ್ತು. ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಿಜವಾದ ಕಳಕಳಿ ಇದ್ದಿದ್ದರೆ ಅವರು ಯಾರಿಗೂ ಹೆದರಬೇಕಾದ ಅಗತ್ಯವಿರಲಿಲ್ಲ.