ಸಿಂದಗಿ ತಾಲ್ಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದ ದಲಿತ ಯುವಕ ಅನಿಲ ಇಂಗಳಗಿ, ದೇವಸ್ಥಾನದಲ್ಲಿ ಸವರ್ಣೀಯ ವ್ಯಕ್ತಿಗಳೊಟ್ಟಿಗೆ ಸರಿಸಮನಾಗಿ ಕುಳಿತಿದ್ದಕ್ಕೆ ಕೊಲೆಗೀಡಾಗಿದ್ದಾರೆ ಎಂದು ಮೊದಲಿಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ವೈಯಕ್ತಿಕ ವ್ಯವಹಾರದಲ್ಲಿ ಉಂಟಾದ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂಬರ್ಥದಲ್ಲಿ ನಂತರ ಸುದ್ದಿ ಪ್ರಕಟವಾಯಿತು. ಕೊಲೆಯಾದ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದವರು, ಕೊಲೆ ಮಾಡಿದವರು ಪ್ರಬಲ ಜಾತಿಗೆ ಸೇರಿದವರು ಎಂಬುದು ಇಲ್ಲಿ ಪ್ರಮುಖವಾದ ಅಂಶ. ದಲಿತರ ಮೇಲೆ ನಡೆದ ಯಾವುದೇ ಹಲ್ಲೆ, ಕೊಲೆಯು ಅಂತಿಮವಾಗಿ ಉದ್ದೇಶಗಳನ್ನು ಜಾತಿಯ ಬಗಲಿನಿಂದ ಎಳೆದು ವ್ಯಕ್ತಿಗತ ನೆಲೆಗೆ ಹಾಗೂ ವ್ಯಾವಹಾರಿಕ ಕಾರಣಕ್ಕೆ ಎಂಬಂತೆ ಬಿಂಬಿಸುವ ಪ್ರಯತ್ನಗಳು ಹೊಸವೇನಲ್ಲ.