ಬೆಂಗಳೂರಿನ ಕೆರೆಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ರಾಜ್ಯ ಸರ್ಕಾರಕ್ಕೆ ₹50 ಕೋಟಿ ಹಾಗೂ ಪಾಲಿಕೆಗೆ ₹25 ಕೋಟಿ ದಂಡ ವಿಧಿಸಿರುವುದು ವರದಿಯಾಗಿದೆ (ಪ್ರ.ವಾ., ಡಿ. 7). ಈ ದಂಡದ ಮೊತ್ತವನ್ನು ಸರ್ಕಾರದ ಬೊಕ್ಕಸದಿಂದ ಪಾವತಿಸದೆ, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳು ಹಾಗೂ ಕೆಲಸ ಮಾಡಿಸದ ಶಾಸಕ, ಸಚಿವರ ಸಂಬಳದಿಂದ ಕಟ್ಟಿಸಿಕೊಳ್ಳಲಿ. ನಾಗರಿಕರ ತೆರಿಗೆಯ ಹಣವನ್ನು ದಂಡ ಪಾವತಿಗೆ ವ್ಯಯಿಸಬಾರದು. ಇಂಥ ಕ್ರಮ ಕೈಗೊಂಡರೆ ಮಾತ್ರ ಅಧಿಕಾರಿಗಳು ಸ್ವಲ್ಪ ಭಯದಿಂದ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವರು. ಇಲ್ಲದಿದ್ದಲ್ಲಿ ‘ಅತ್ತೆಯ ಸೊತ್ತನ್ನು ಅಳಿಯ ದಾನ ಮಾಡಿದಂತೆ’ ಎಂಬ ನಾಣ್ಣುಡಿಯಂತೆ ಬಡ ತೆರಿಗೆದಾರನ ಹಣದಲ್ಲಿ ದಂಡ ಕಟ್ಟಿ ಎಲ್ಲರೂ ನಿಶ್ಚಿಂತೆಯಿಂದಿರುತ್ತಾರೆ.