ತಮಿಳುನಾಡಿನಲ್ಲಿ ಆನೆಯೊಂದು ಮಾನವನ ಕ್ರೌರ್ಯಕ್ಕೆ ಬಲಿಯಾದ ಪ್ರಕರಣವನ್ನು ಒಳಗೊಂಡ ಪ.ರಾಮಕೃಷ್ಣ ಶಾಸ್ತ್ರಿ ಅವರ ಲೇಖನ (ಸಂಗತ, ಜ. 25) ವಾಸ್ತವಾಂಶಗಳನ್ನು ನಮ್ಮ ಮುಂದಿಟ್ಟಿದೆ. ಪ್ರಕೃತಿ ವಿಕೋಪಕ್ಕೆ ಅಥವಾ ರೋಗ ರುಜಿನಗಳಿಗೆ ತುತ್ತಾಗಿ ಬೆಳೆ ನಾಶವಾದಾಗ ಮಾನವ ವಿಧಿಯನ್ನು ಶಪಿಸಿ ಸುಮ್ಮನೆ ಕೂರುತ್ತಾನೆ.
ಆದರೆ ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದಾಗ ಮಾತ್ರ ಆತನ ಅಸಹನೆಯ ಜ್ವಾಲಾಮುಖಿ ಸ್ಫೋಟಗೊಳ್ಳುವುದನ್ನು ಕಾಣುತ್ತೇವೆ. ಆಗ ಆತನ ಕೋಪಕ್ಕೆ ಸುಲಭವಾಗಿ ಗುರಿಯಾಗುವುದು ಅಮಾಯಕ ಕಾಡುಪ್ರಾಣಿಗಳು. ತಮಿಳುನಾಡಿನಲ್ಲಿ ಆನೆಯೊಂದು ದುರಂತ ಅಂತ್ಯ ಕಂಡದ್ಡು ದೇಶದ ಮಾನವೀಯ ಹೃದಯಗಳನ್ನು ತಲ್ಲಣಗೊಳಿಸದೇ ಇರಲಾರದು. ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು.