ಮದ್ದೂರು: ಅವಧಿಗೆ ಮುನ್ನವೇ ರೈತರು ಅಡವಿಟ್ಟ ಚಿನ್ನಾಭರಣಗಳನ್ನು ಬಹಿರಂಗ ಹರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಪಟ್ಟಣದ ಐಐಎಫ್ಎಲ್ ಗೋಲ್ಡ್ ಲೋನ್ ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು. ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತೆಂಗು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಚನ್ನಸಂದ್ರ ಮಾತನಾಡಿ, ‘ಐಐಎಫ್ಎಲ್ ಸಂಸ್ಥೆಯು ರೈತರಿಗೆ ಯಾವುದೇ ಸೂಚನೆ ನೀಡದೇ ಚಿನ್ನಾಭರಣಗಳನ್ನು ಅವಧಿಗೆ ಮುನ್ನವೇ ಬಹಿರಂಗ ಹರಾಜು ಮಾಡುವ ಮೂಲಕ ವಂಚಿಸುತ್ತಿದೆ. ಈ ಸಂಸ್ಥೆಯ ವಂಚನೆಗೆ ಸಿಲುಕಿದ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ಒದಗಿದೆ. ತಾಲ್ಲೂಕು ಹಾಗೂ ಜಿಲ್ಲಾಡಳಿತ ಕೂಡಲೇ ಈ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.