ಮಹಿಳೆಯರು ಚುನಾವಣೆಗಳಲ್ಲಿ ಗೆಲ್ಲುವುದಿಲ್ಲ ಎಂಬ ನೆಪ ಮುಂದೊಡ್ಡಿ ಟಿಕೆಟ್ ನಿರಾಕರಿಸುವಂತೆ ಸಾಹಿತಿ, ಕಲಾವಿದರಿಗೂ ನಿರಾಕರಿಸಲಾಗುತ್ತಿದೆ. ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗರಂತಹವರನ್ನೂ ನಮ್ಮ ಮತದಾರರು ಸೋಲಿಸಿದ ಉದಾಹರಣೆಗಳಿವೆ. ವಿಧಾನಪರಿಷತ್, ರಾಜ್ಯಸಭೆಯಲ್ಲಿ ಹಿರಿಯ ಸಾಹಿತಿಗಳು, ಸಮಾಜಸೇವಕರು, ಕಲಾವಿದರಿಗಾಗಿ ಸಂವಿಧಾನಕರ್ತರು ಇರಿಸಿರುವ ಸ್ಥಾನಗಳು ಸಹ ರಾಜಕಾರಣಿಗಳ ಪಾಲಾಗುತ್ತಿರುವುದು ವಿಷಾದನೀಯ. ಅಧಿಕಾರಸ್ಥರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮತದಾರರು ಪ್ರಜ್ಞಾವಂತರಾಗಿ, ಸಾಂಸ್ಕೃತಿಕ ನಂಟುಳ್ಳವರನ್ನು ಆರಿಸಿ, ದೇಶವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಹಕರಿಸಬೇಕು.