ಧಾರವಾಡದ ‘ಸಾಹಿತ್ಯ ಸಂಭ್ರಮ’ದ ಬಗ್ಗೆ ನಿಲುವುಗಳು, ಭಿನ್ನಾಭಿಪ್ರಾಯಗಳು ಏನೇ ಇರಲಿ, ಏನೇನೂ ನಡೆಯದ ಕಾಲದಲ್ಲಿ ಸಾಹಿತ್ಯ ಮಂಥನಕ್ಕೆ ಒಂದು ನಿರ್ದಿಷ್ಟ ವೇದಿಕೆಯೊಂದಿದೆ ಎನ್ನುವುದು ಖುಷಿಯ ಸಂಗತಿ. ಮೊನ್ನೆ ಆದ ದಾಳಿಯ ವಿಡಿಯೊ ನೋಡಿದರೆ ಗಾಬರಿ ಆಗುವಂತಿದೆ. ಎಂಬತ್ತರ ವಯಸ್ಸಿನ, ನಮ್ಮ ನಡುವಿನ ಗೌರವಾರ್ಹ ಸಂಶೋಧಕರಾದ ಕೃಷ್ಣಮೂರ್ತಿ ಹನೂರು ಮಾತನಾಡುತ್ತಿದ್ದಾಗ ವೇದಿಕೆ ಏರಿ ಬರುವ ವ್ಯಕ್ತಿಗಳು, ಮೈಕ್ ಎತ್ತಿ ನೆಲಕ್ಕೆ ಅಪ್ಪಳಿಸುತ್ತಾರೆ. ಕುರ್ಚಿಗಳನ್ನು ನೆಲಕ್ಕೆ ಎಸೆಯುತ್ತಾರೆ.