ವರ್ಷವಿಡೀ ಕಲಿಯುತ್ತಿದ್ದರೂ ಪರೀಕ್ಷೆಗೆ ಮಾತ್ರ ಚಕ್ಕರ್ ಹೊಡೆಯುತ್ತಿದ್ದ ವಯಸ್ಕರನ್ನು ಪರಿಹಾರ ಕೇಂದ್ರಗಳಲ್ಲಿ ಒಟ್ಟುಗೂಡಿಸಿ ಪರೀಕ್ಷೆ ಬರೆಸುವಲ್ಲಿ ವಯಸ್ಕರ ಶಿಕ್ಷಣ ವಿಭಾಗ ಸಫಲವಾಗಿರುವುದನ್ನು ತಿಳಿದು (ಪ್ರ.ವಾ., ಸೆ.12) ನಮ್ಮ ಸರ್ಕಾರಕ್ಕೆ ಶಿಕ್ಷಣದ ಕುರಿತು ಇರುವಂತಹ ವಿಶೇಷ ಕಾಳಜಿಗೆ ಹೆಮ್ಮೆ ಎನಿಸಿತು. ಈ ವಯಸ್ಕರು ನಾನಾ ಕಾರಣಗಳನ್ನು ನೀಡಿ ಪರೀಕ್ಷೆಗೆ ಚಕ್ಕರ್ ಹೊಡೆಯುತ್ತಿದ್ದವರು. ಆದರೆ, ಈ ಬಾರಿ ಪರೀಕ್ಷಾ ಸಮಯದಲ್ಲೇ ಜಿಲ್ಲೆಗೆ ಬಂದ ಭೀಕರ ಪ್ರವಾಹ, ಅವರನ್ನೆಲ್ಲ ಸಂತ್ರಸ್ತರನ್ನಾಗಿ ಮಾಡಿ ಶಾಲಾ ಕೊಠಡಿಗಳಿಗೆ (ಪರಿಹಾರ ಕೇಂದ್ರ) ತಳ್ಳಿತ್ತು. ವಯಸ್ಕರ ಶಿಕ್ಷಣ ವಿಭಾಗವು ಇದರ ಲಾಭ ಪಡೆಯಲು ಯಶಸ್ವಿಯಾಗಿ, ಅಲ್ಲೇ ಪರೀಕ್ಷೆ ಬರೆಸುವ ಮೂಲಕ ಶೇ 99ರಷ್ಟು ಹಾಜರಾತಿಯ ಸಾಧನೆ ಮಾಡಿರುವುದು ಖುಷಿ ತರುವ ಸಂಗತಿ.