ಎಚ್.ಡಿ.ಕುಮಾರಸ್ವಾಮಿ ಅವರು ವರನಟ ಡಾ. ರಾಜ್ಕುಮಾರ್ ಅವರ ಬಗ್ಗೆ ಬರೆದ ಲೇಖನದಲ್ಲಿ (ಪ್ರ.ವಾ., ಏ.24) ‘ಕನ್ನಡ ಭಾಷೆಯ ಬೆಳವಣಿಗೆಯ ದಿಕ್ಕನ್ನು ಬದಲಿಸಿದ ಗೋಕಾಕ್ ಚಳವಳಿಯು ಆಧುನಿಕ ಕರ್ನಾಟಕದ ಇತಿಹಾಸದ ಭಾಗ. ಈ ಚಳವಳಿಗೆ ತೀವ್ರ ಹೋರಾಟದ ಸ್ವರೂಪ ಬಂದದ್ದೇ ರಾಜ್ಕುಮಾರ್ ಅವರು ಚಳವಳಿಗೆ ಧುಮುಕಿದ ಮೇಲೆ’ ಎಂದು ಕನ್ನಡ ನಾಡು ನುಡಿಯ ಬಗ್ಗೆ ಅಪಾರವಾದ ಮಾತೃವಾತ್ಸಲ್ಯದಿಂದ ತಮ್ಮ ಅಕ್ಷರಗಳನ್ನು ದಾಖಲಿಸಿದ್ದಾರೆ.
ಸಾಮ್ರಾಟನಾಗಿ ಮೆರೆದ ಕನ್ನಡ ಸಿರಿನುಡಿಯು ಪ್ರಸ್ತುತ ಗಂಭೀರ ಕಾಯಿಲೆಗಳಿಂದ ನರಳುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇಂದಿಗೂ ಬಹುತೇಕ ಕೇಂದ್ರೀಯ ನೇಮಕಾತಿ ಪರೀಕ್ಷೆಗಳು ಇಂಗ್ಲಿಷ್ ಮತ್ತು ಅದರ ಜೊತೆಗೇ ಸ್ವರ್ಗದಿಂದ ಇಳಿದು ಬಂದಂತಿರುವ ದೇವಭಾಷೆ ಹಿಂದಿಯಲ್ಲಿ ಮಾತ್ರ ನಡೆಯುತ್ತಿವೆ.
ಕುಮಾರಸ್ವಾಮಿ ಈ ವಿಷಯದಲ್ಲಿ ಮುತುವರ್ಜಿ ವಹಿಸಿ, ಒಕ್ಕೂಟ ವ್ಯವಸ್ಥೆಯ ಪ್ರಾಥಮಿಕ ಪಾಠಗಳನ್ನು ಕೇಂದ್ರ ಸರ್ಕಾರಕ್ಕೆ ಕಲಿಸಬೇಕಿದೆ. ಈ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಸಿಕ್ಕಿದ್ದೇ ಆದರೆ, ಕನ್ನಡದ ಪದವೀಧರ ನಿರುದ್ಯೋಗಿಗಳ ಪಾಲಿಗೆ ಭಾಗ್ಯದ ಬಾಗಿಲೇ ತೆರೆದಂತಾಗುತ್ತದೆ.