‘ತೋಟಗಳಿಗೆ ಬೀಳುತ್ತಿವೆ ಕೊಡಲಿ ಪೆಟ್ಟು’ (ಪ್ರ.ವಾ., ಮೇ 19) ವರದಿ ನೋಡಿ ದುಃಖವಾಯಿತು. ರಾಜ್ಯದಲ್ಲಿ ಕುಡಿಯುವ ನೀರಿಗೂ ಬರ ಇರುವಾಗ ರೈತರ ಜಮೀನಿಗೆ ನೀರು ಸಿಗುವುದು ಕಷ್ಟ. ಈ ಸಂದರ್ಭದಲ್ಲಿ ಸರ್ಕಾರ ಅನ್ನದಾತನ ಜೊತೆಗಿರಬೇಕು.
ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕೃಷಿ ಇಲಾಖೆ ನೇತೃತ್ವದಲ್ಲಿ ಪ್ರತಿ ಗ್ರಾಮದಲ್ಲಿ ರೈತರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೂಡಲೇ ಆಯೋಜಿಸುವಂತೆ ಸುತ್ತೋಲೆ ಹೊರಡಿಸಬೇಕು.
ರೈತರಿಗೆ ಮಿಶ್ರ ಬೆಳೆ, ನೀರಿನ ಮಿತಬಳಕೆ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ ಉತ್ತೇಜಿಸುವ, ಹವಾಮಾನ ವೈಪರೀತ್ಯ ಕುರಿತು ಹಾಗೂ ಸರ್ಕಾರಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಈ ಕುರಿತು ಸ್ಥಳೀಯ ಸಂಘ ಸಂಸ್ಥೆಗಳು ಸಹ ಸಕ್ರಿಯವಾಗಬೇಕಿದೆ.