ಕೋಲಾರ ಜಿಲ್ಲೆಯ ಗ್ರಾಮವೊಂದರ ಜಮೀನಿನಲ್ಲಿ ಇತ್ತೀಚೆಗಷ್ಟೇ ರೈತ ಮಹಿಳೆಯೊಬ್ಬರು ಆಕಸ್ಮಿಕವಾಗಿ ಟ್ರ್ಯಾಕ್ಟರ್- ರೋಟರ್ಗೆ ಸಿಲುಕಿ ಮೃತಪಟ್ಟ ಘಟನೆಯ (ಪ್ರ.ವಾ., ಮೇ 30) ಬೆನ್ನಲ್ಲೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಜಮೀನು ಉಳುಮೆ ಮಾಡುವಾಗ ಆಯತಪ್ಪಿ ಟ್ರ್ಯಾಕ್ಟರ್- ರೋಟರ್ಗೆ ಸಿಲುಕಿದ ರೈತನ ದೇಹ ಛಿದ್ರವಾದ ಬಗ್ಗೆ ವರದಿಯಾಗಿದೆ (ಪ್ರ.ವಾ., ಜೂನ್ 1). ಇನ್ನು ಕೃಷಿ ಹೊಂಡಕ್ಕೆ ಬಿದ್ದು ಜೀವ ಕಳೆದುಕೊಂಡ ಅನೇಕ ಘಟನೆಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇವಲ್ಲದೆ ರೈತರು ಸ್ವರಕ್ಷಣಾ ಸಾಧನಗಳನ್ನು ಉಪಯೋಗಿಸದೆ ಕ್ರಿಮಿ, ಕೀಟ ಹಾಗೂ ಕಳೆನಾಶಕಗಳಂಥ ಅಪಾಯಕಾರಿ ರಾಸಾಯನಿಕಗಳನ್ನು ಬೆಳೆಗಳಿಗೆ ಸಿಂಪಡಿಸುವಾಗ ರಾಸಾಯನಿಕಗಳು ಕೃಷಿಕನ ದೇಹವನ್ನು ಸೇರಿ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇಂಥ ಅನೇಕ ಘಟನೆಗಳು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಸುರಕ್ಷತೆಗೆ ನಾವು ಒತ್ತು ನೀಡುತ್ತಿಲ್ಲ ಎಂಬುದಕ್ಕೆ ನಿದರ್ಶನಗಳು.