ಪಟಾಕಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಗಂಭೀರವಾದದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ (ಪ್ರ.ವಾ., ಸೆ. 30). ಸರಿಯೇ, ನಮ್ಮ ದೇಶದಲ್ಲಿ ವರ್ಷದುದ್ದಕ್ಕೂ ವಿವಿಧ ಕಾರಣಗಳಿಗಾಗಿ ಪಟಾಕಿ ಸುಡುವ ವಿಚಿತ್ರ ಖಯಾಲಿಯೊಂದು ಇತ್ತೀಚೆಗೆ ಸಾಂಕ್ರಾಮಿಕವಾಗಿದೆ. ಹಬ್ಬ, ಜಾತ್ರೆ, ಮದುವೆ, ಶವಯಾತ್ರೆ, ಚುನಾವಣಾ ಗೆಲುವು ಅಲ್ಲದೆ ಕೆಲವು ವೇಳೆ ಪ್ರಾಣಿಪಕ್ಷಿಗಳನ್ನು ಹೆದರಿಸಲು ಸಹ ಪಟಾಕಿ ಸುಡುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಈ ಪಟಾಕಿಗಳು ಯಾವ ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿವೆ? ಅವುಗಳ ಬಳಕೆ ಸುರಕ್ಷಿತವೇ? ಪಟಾಕಿ ಬಳಕೆ ಪರಿಸರಕ್ಕೆ ಮಾರಕವೇ ಎನ್ನುವುದೆಲ್ಲಾ ಸಾಮಾನ್ಯ ಜನರಿಗೆ ಬೇಡದ ವಿಚಾರ. ಅವರ ನಿರೀಕ್ಷೆ ಒಂದೇ, ತಾವು ಖರೀದಿಸುವ ಪಟಾಕಿ ಕಡಿಮೆ ಬೆಲೆಯದ್ದಾಗಿರಬೇಕು ಜೊತೆಗೆ ಅಕ್ಕಪಕ್ಕದವರ ಕಿವಿ ತಮಟೆ ಹರಿದುಹೋಗುವಂತೆ ಶಬ್ದ ಹೊರಡಿಸಬೇಕು!
ಜನಸಾಮಾನ್ಯರ ಈ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡು ಅನೇಕ ವಿಷಕಾರಿ ಪಟಾಕಿಗಳು ರೂಪು
ಗೊಳ್ಳುತ್ತವೆ ಮತ್ತು ಇವುಗಳ ಬಳಕೆ ತೀವ್ರತರ ಪಾರಿಸರಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರ ಅರಿವು ನಮ್ಮವರಿಗೆ ಬರುವುದು ಯಾವಾಗ? ಇಂತಹ ಶಿಕ್ಷಣವನ್ನು ಶಾಲೆಗಳಲ್ಲಿ ಕೊಡಲು ಸೋತಿದ್ದೇವೆಯೇ ಎಂದು
ಪರಾಮರ್ಶಿಸಿಕೊಳ್ಳಬೇಕಿದೆ. ನೆಲ-ಜಲ-ವಾಯುವನ್ನು ವಿಷಮಯಗೊಳಿಸುವ ಪಟಾಕಿಗಳನ್ನು ನಿಷೇಧಿಸುವ ಮೂಲಕ ಸರ್ಕಾರಗಳು ಜನರ ಮತ್ತು ಪರಿಸರದ ಆರೋಗ್ಯವನ್ನು ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಿ.
ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.