ಗುಂಡ್ಲುಪೇಟೆ ತಾಲ್ಲೂಕಿನ ಗುಂಡ್ಲು ನದಿ ಬತ್ತಿಹೋಗಿದ್ದು ತಾಲ್ಲೂಕಿನ ಜನ ನೀರಿಗೆ ಪರದಾಡುವಂತಾಗಿದೆ ಎಂದು ರಾಘವೇಂದ್ರ ಅಪುರಾ ಬರೆದಿದ್ದಾರೆ (ವಾ.ವಾ., ಅ. 21). ದೇಶದ ಎಷ್ಟೋ ನದಿಗಳು ಸತ್ತುಹೋಗಿವೆ. ಸರಸ್ವತಿ, ಕಣ್ವ, ಅರ್ಕಾವತಿ, ಪಿನಾಕಿನಿಯಂತಹ ನದಿಗಳು ಕ್ಷೀಣಿಸಲು ಮಾನವನ ದುರ್ನಡತೆಯೇ ಕಾರಣ.
ಜಲ ಕಾಯಕಕ್ಕಾಗಿ ಹೆಸರಾಗಿರುವ ರಾಜೇಂದ್ರ ಸಿಂಗ್ ಅವರು ರಾಜಸ್ಥಾನದಲ್ಲಿ ಸತ್ತು ಹೋದ ಐದು ನದಿಗಳಿಗೆ ಜೀವ ತುಂಬಿ ಸಾವಿರಾರು ಹಳ್ಳಿಗಳಿಗೆ ನೀರುಣಿಸುವಂತೆ ಮಾಡಿದ್ದಾರೆ. ಅದೇ ರೀತಿ ಗುಂಡ್ಲು ನದಿಯೂ ಸದಾ ಹರಿಯುವಂತೆ ಮಾಡಲು ಈ ಅಂಶಗಳನ್ನು ಪಾಲಿಸುವುದು ಒಳಿತು: 1. ನದಿ ಪಾತ್ರದ ಎರಡೂ ಬದಿಯಲ್ಲಿ ಇಂಗು ಗುಂಡಿ ನಿರ್ಮಾಣ. 2. ಕೃಷಿ ಹೊಂಡ, ನಾಲಾಬದು ನಿರ್ಮಾಣ. 3. ರಾಜಕಾಲುವೆ ಮಾಡಿ ಕೆರೆಗಳ ಹೂಳು ತೆಗೆಯುವುದು. 4. ಮರಗಳನ್ನು ಬೆಳೆಸುವುದು. 5. ಅರಣ್ಯ ರಕ್ಷಣೆ ಮಾಡುವುದು.
ಗುಂಡ್ಲುಪೇಟೆ ಯುವಕರು ರಾಜಸ್ಥಾನಕ್ಕೆ ಹೋಗಿ, ಅಲ್ಲಿ ಪುನರುಜ್ಜೀವಗೊಂಡಿರುವ ನದಿಯನ್ನು ಖುದ್ದಾಗಿ ನೋಡಿ ಬಂದು ಗುಂಡ್ಲು ನದಿಗೆ ಜೀವ ತುಂಬುವ ಪ್ರಯತ್ನ ಮಾಡಬಹುದು. ಕುಡಿಯುವ ನೀರಿಗೆ ಪರಿತಪಿಸುವ ಬದಲು ಮನೆ ತಾರಸಿ ಮೇಲೆ ಬೀಳುವ ಮಳೆ ನೀರು ಸಂಗ್ರಹಿಸಿ ಬಳಸಬಹುದು. ರೈತರು ಕೃಷಿ ಹೊಂಡ ನಿರ್ಮಾಣ ಮಾಡಿ ಮಳೆ ನೀರು ಸಂಗ್ರಹಿಸಿ ಬಳಸಬಹುದು.