ಚಿಕ್ಕಮಗಳೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (ಎನ್ಎಚ್)– 173 ವಿಸ್ತರಣೆಗೆ ರಸ್ತೆಯ ಇಕ್ಕೆಲದ ಎರಡು ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿರುವುದನ್ನು ತಿಳಿದು ಬೇಸರವಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಹನನ ಮಾಡುವುದರಿಂದ ಪ್ರಕೃತಿ ಅಸಮತೋಲನ ಉಂಟಾಗುವುದಲ್ಲದೆ ಈ ಮರಗಳನ್ನೇ ಆಶ್ರಯಿಸಿರುವ ಸಾವಿರಾರು ಪಕ್ಷಿಗಳಿಗೂ ನೆಲೆ ಇಲ್ಲದಂತಾಗಿ ಪಕ್ಷಿಸಂಕುಲ ನಶಿಸುವ ಸಂಭವ ಇರುತ್ತದೆ. ಹೀಗೆ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿಯುತ್ತಾ ಹೋದರೆ ಮುಂದೊಂದು ದಿನ ಭೂಮಿ ಬರಡಾಗುವುದರಲ್ಲಿ ಎರಡು ಮಾತಿಲ್ಲ. ಕಡಿಯಲಾದ ಒಂದು ಮರದ ಬದಲಿಗೆ ಹತ್ತು ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿದೆ. ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಹೀಗೆ ಮರಗಳನ್ನು ಬಲಿ ಪಡೆಯುವುದು ಬಿಟ್ಟು, ಪರ್ಯಾಯ ಮಾರ್ಗಗಳತ್ತ ಚಿಂತಿಸಬೇಕಾಗಿದೆ.