‘ಗಾಂಧೀಜಿ ಅವರು ಸತ್ಯ, ಅಹಿಂಸೆಯ ಮಾರ್ಗದಲ್ಲಿ ಸರ್ವ ಜನಾಂಗದ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯಕ್ಕಾಗಿ ದುಡಿದದ್ದು ಇತಿಹಾಸವೇ ಆಗಿದೆ. ಈಗ ಗಾಂಧಿಯನ್ನು ‘ರಾಜಕೀಯ ಬಂಡವಾಳ’ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು ಗೋಚರಿಸುತ್ತಿದೆ.
ತೋರಿಕೆಯ ಪ್ರೀತಿ, ಗೌರವಗಳಿಗಿಂತ ಗಾಂಧೀಜಿ ನಂಬಿ ಆಚರಣೆಗೆ ತಂದಿದ್ದ, ‘ಜನಸೇವೆ, ಸರಳತೆ ಮತ್ತು ಸ್ವಚ್ಛತೆ’ಗಳು ಜೀವನದ ಕ್ರಮವಾಗುವುದು ಇಂದಿನ ಅಗತ್ಯವಾಗಿದೆ. ಗಾಂಧಿಯ ಬಗ್ಗೆ ಮಾತನಾಡುವ ಪ್ರಭುತ್ವವು ಅವರ ಕಲ್ಪನೆಯ ಗ್ರಾಮ ಸ್ವರಾಜ್ಯಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಾಗಿದೆ.
ಸ್ವಾತಂತ್ರ್ಯಾನಂತರ ನಾವು ಹಾಕಿಕೊಂಡ ಯೋಜನೆಗಳು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪೂರಕವಾಗುವಂತಿಲ್ಲ. ಗಾಂಧೀಜಿಯನ್ನು ಸ್ಮರಿಸುವುದೆಂದರೆ ಸ್ವಾವಲಂಬನೆ, ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸಾರ್ವಜನಿಕ ಬದುಕಿನಲ್ಲಿ ಶುಚಿತ್ವ ಕಾಪಾಡುವುದಾಗಿದೆ. ಈ ನಿಟ್ಟಿನಲ್ಲೂ ಸ್ವಚ್ಛತೆಯ ಅರಿವು ಮೂಡಿಸುವ ಅಗತ್ಯವಿದೆ.
ಭಾರತದಲ್ಲಿ ಈಚೆಗೆ ನಡೆಯುತ್ತಿರುವ ವಿದ್ಯಮಾನಗಳು ಸ್ವಾವಲಂಬನೆಯ ಕ್ಷಿತಿಜವನ್ನು ಹೆಚ್ಚಿಸಲು ಪೂರಕವಾಗಿಯಾಗಲಿ, ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಾಗಲಿ ಇಲ್ಲ. ಸತ್ಯವನ್ನು ಅನುಸರಿಸುವ ನಿಟ್ಟಿನಲ್ಲಿ ನಾವು ಎಚ್ಚರಗೊಂಡರೆ ‘ಸ್ವಚ್ಛತೆ’ ಸಾಕಾರಗೊಳ್ಳದಿರಲಾರದು.