ಕೂಲಿ ಕಾರ್ಮಿಕರ ನಡುವೆ ವೇತನದಲ್ಲಿ ಲಿಂಗತಾರತಮ್ಯ ಸಹಜ ಎಂದು ಜಿ.ಎಚ್.ವೆಂಕಟೇಶಮೂರ್ತಿ ಅವರು ಬರೆದಿದ್ದಾರೆ (ವಾ.ವಾ., ಏ. 6). ಶ್ರಮದ ಮೌಲ್ಯ ನಿರ್ಧರಿಸುವುದು ಎತ್ತುವ ಭಾರವೋ? ಸುರಿಸುವ ಬೆವರೋ? ವಿನಿಯೋಗಿಸುವ ಸಮಯವೋ? ಅಥವಾ ಕೆಲಸದ ಉಪಯುಕ್ತತೆಯೋ? ಭಾರ-ಸಮಯ- ಉಪಯುಕ್ತತೆಯೇ ಮಾನದಂಡವಾಗಿದ್ದಲ್ಲಿ ಇವತ್ತು ಅತಿಹೆಚ್ಚು ಕೂಲಿಯು ಮಲದಗುಂಡಿಗೆ ಇಳಿಯುವ ಸಫಾಯಿ ಕರ್ಮಚಾರಿಗಳಿಗೆ, ಕಲ್ಲುಮಣ್ಣು ಇಟ್ಟಿಗೆ ಹೊರುವವರಿಗೆ, ಗಣಿ ಕೆಲಸದವರಿಗೆ, ಬಸುರಿನ ಭಾರದ ಜೊತೆಗೆ ದುಡಿಯುವ ಹೆಣ್ಣುಗಳಿಗೆ ಸಿಗಬೇಕಿತ್ತು. ವಿಪರ್ಯಾಸವೆಂದರೆ, ಭಾರತದಲ್ಲಿ ಶ್ರಮದ ಕೆಲಸ ಕೀಳು, ಅದಕ್ಕೆ ಅತಿಕಡಿಮೆ ವೇತನ. ವಿರಾಮದಲ್ಲಿ ಮಾಡುವ ಬೌದ್ಧಿಕ ಕೆಲಸಗಳಿಗೆ ಕೈತುಂಬ ಸಂಬಳ. ಇನ್ನು ಹೆಣ್ಣು ದುಡಿಮೆಯನ್ನಂತೂ ಕೇಳುವಂತೇ ಇಲ್ಲ.