ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿದೆ. ಈಗಿನಿಂದಲೇ ಮುಖ್ಯಮಂತ್ರಿ ಅಭ್ಯರ್ಥಿ ಬಗೆಗಿನ ಚರ್ಚೆ ಅನವಶ್ಯಕ. ಚುನಾವಣೆ ಎಂದರೆ ಅದೊಂದು ಮಹಾಸಮರ ಎಂಬಂತೆ ಕೆಲವು ಮಾಧ್ಯಮಗಳು ಬಿಂಬಿಸುತ್ತವೆ. ಅಂತಹ ಸಮರಕ್ಕೆ ತಯಾರಿ ನಡೆಸುವ ರೀತಿಯಲ್ಲಿ, ಮುಂಚೂಣಿಯಲ್ಲಿರುವ ನಾಯಕರು ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸಬಹುದು. ಫಲಾಪೇಕ್ಷೆ ಇಲ್ಲದೆ ಹಳ್ಳಿಯ ಕೊಂಪೆಗಳಿಗೂ ನಗರ ಪ್ರದೇಶದ ಗಲ್ಲಿ ಗಲ್ಲಿಗೂ ಹೋಗಿ ನೊಂದಿರುವ ಜೀವಗಳಿಗೆ ಸಹಾಯಹಸ್ತ ಚಾಚಲು ಮಾರ್ಗದರ್ಶನ ಮಾಡಬಹುದು. ಆಸ್ಪತ್ರೆ, ಔಷಧಗಳ ವ್ಯವಸ್ಥೆ ಮಾಡಬಹುದು. ಇಂತಹ ನೆರವಿನ ಅವಶ್ಯಕತೆ ಇರುವ ಇಂದಿನ ಈ ದಿನಗಳಲ್ಲಿ ಎಷ್ಟು ಬೆವರು ಹರಿಸುತ್ತೀರೋ, ಜನರಿಗೆ ಹತ್ತಿರವಾಗುವ ಅಷ್ಟು ಅವಕಾಶ ನಿಮ್ಮದಾಗುತ್ತದೆ ಎಂಬುದನ್ನು ಮರೆಯಬಾರದು.
-ವಿಶಾಲಾಕ್ಷಿ ಶರ್ಮಾ,ಬೆಂಗಳೂರು