ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಐದು ಲಕ್ಷ ರೂಪಾಯಿ ದಂಡ ಹಾಕಿರುವುದು ವರದಿಯಾಗಿದೆ (ಪ್ರ.ವಾ., ಡಿ. 15). ಸಮಾಜವಾದಿ ಚಿಂತಕ ಎಸ್.ಕೆ.ಡೇ ಅವರು ಮೂವತ್ತೈದು ವರ್ಷಗಳ ಹಿಂದೆ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಜನರ ಪಾಲ್ಗೊಳ್ಳುವಿಕೆ ಮತ್ತು ಪ್ರಾತಿನಿಧ್ಯ ಬಹಳ ಮುಖ್ಯವೆಂಬ ಆಶಯದಿಂದ ರೂಪಿಸಿದ ರಾಜಕೀಯ ತತ್ವವನ್ನು, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ಅವರು ತುಂಬ ಮುತುವರ್ಜಿಯಿಂದ ಪಾಲಿಸಿ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತಂದು ಜನರ ಕೈಗೆ ಅಧಿಕಾರ ನೀಡಿದರು. ಅಂದಿನಿಂದ ಚುನಾವಣೆಯ ಮೂಲಕ ಸ್ಥಳೀಯ ಅಭಿವೃದ್ಧಿ, ಆಡಳಿತವು ಜನಪ್ರತಿನಿಧಿಗಳ ಕೈಯಲ್ಲಿ ಇತ್ತು. ಆದರೆ, ಚುನಾವಣೆ ನಡೆಯದ ಕಾರಣ ಒಂದು ವರ್ಷದಿಂದ ಜನಪ್ರತಿನಿಧಿ ಗಳ ಆಳ್ವಿಕೆ ಇಲ್ಲ. ಈಗ ಮೀಸಲಾತಿ ಗೊಂದಲವನ್ನು ಮುಂದೆಮಾಡಿದೆ ರಾಜ್ಯ ಸರ್ಕಾರ. ಒಟ್ಟಿನಲ್ಲಿ ಅಧಿಕಾರವು ಜನಪ್ರತಿನಿಧಿಗಳ ಕೈ ತಪ್ಪಿ ಅಧಿಕಾರಿಗಳ ಕೈಗೆ ಸೇರಿದೆ.