ರಾಜ್ಯಸಭೆಯ ಹಿಂದಿಯೇತರ ಸದಸ್ಯರು ಹಿಂದಿ ಕಲಿಯಲಿ ಎಂಬ ಉದ್ದೇಶದಿಂದ ಜನಪ್ರಿಯ ಹಿಂದಿ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದಂತೆ. ಹಾಗಿದ್ದರೆ ಹಿಂದಿ ಭಾಷಿಕ ಸದಸ್ಯರಿಗೆ ಕನ್ನಡ, ತಮಿಳು, ತೆಲುಗು ಮೊದಲಾದ ಹಿಂದಿಯೇತರ ಚಿತ್ರಗಳನ್ನು ತೋರಿಸಲಿ. ಅವರೂ ನಮ್ಮ ಭಾಷೆ ಕಲಿಯುವುದು ಬೇಡವೇ?
ಗಿರೀಶ್ ಕಾರ್ಗದ್ದೆ,ಬಾಳೆಹೊನ್ನೂರು
***
ಸಮತೋಲನವಿದೆ ಆದರೆ...
ರಾಜ್ಯದ ಈ ಸಲದ ಮುಂಗಡಪತ್ರದಲ್ಲಿ ಸಮತೋಲನ ಕಾಯ್ದುಕೊಂಡಿರುವುದು ವಿಶೇಷ. ಏಕೆಂದರೆ, ಈ ಬಾರಿ ಕಳೆದ ವರ್ಷದ ಬಜೆಟ್ನಂತೆ ಉತ್ತರ ಕರ್ನಾಟಕವನ್ನು ಮರೆತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕನಸುಗಳನ್ನು ಮೆಚ್ಚಬೇಕಾದದ್ದೇ. ಅಹಿತಕರ ರಾಜಕೀಯ ವಿದ್ಯಮಾನಗಳ ನಡುವೆ ಇಂತಹ ಪ್ರಯತ್ನ ಸಾಹಸವೇ ಸರಿ.
ಈ ಬಜೆಟ್ನಲ್ಲಿ ಸುಮಾರು 40 ಗುರುಪೀಠಗಳಿಗೆ ಅನುದಾನ ನೀಡಿದಂತೆ, ರಾಜ್ಯದಲ್ಲಿರುವ ವಸ್ತುಸಂಗ್ರಹಾಲಯ ಹಾಗೂ ನಗರ ಗ್ರಂಥಾಲಯಗಳ ಅಭಿವೃದ್ಧಿಗೆ ಹಾಗೂ ಕರ್ನಾಟಕ ಸಂಘಗಳಿಗೆ, ಕನ್ನಡ ಸಂಘಗಳಿಗೆ ಅನುದಾನ ನೀಡಿದ್ದರೆ ಈ ಮುಂಗಡ ಪತ್ರಕ್ಕೆ ಮತ್ತಷ್ಟು ಮೆರುಗು ಬರುತ್ತಿತ್ತು.