ಅದೇ ರೀತಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಅನಗತ್ಯವಾಗಿ ಬಂಧಿಸಿ ಜೈಲಿನಲ್ಲಿಟ್ಟು, ಅಲ್ಲಿಂದ ಅವರನ್ನು ಜೀವಂತವಾಗಿ ಹೊರಬಾರದಂತೆ ಮಾಡಿದ ಹಿಂದೆ ಯಾರಿದ್ದಾರೆ, ಯಾವ ಕಾರಣ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಇಚ್ಛಿಸುವುದರಲ್ಲಿ ತಪ್ಪೇನಿದೆ? ಮಹಾವೀರ್ ತ್ಯಾಗಿ ಎಂಬ ಕಾಂಗ್ರೆಸ್ ಸದಸ್ಯ ‘ನೀವು ಇಂದು ರಚಿಸಿರುವ ಸಂವಿಧಾನದ ಖಂಡಗಳ ಅಡಿಯಲ್ಲಿ ನೀವೇ ಬಂಧಿತರಾಗುವ ಅವಕಾಶ ನಿಮಗೆ ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಖಂಡಿತವಾಗಿಯೂ ಸಿಗುತ್ತದೆ’ ಎಂದು ಘಂಟಾಘೋಷವಾಗಿ ಹೇಳಿದ್ದರು. ಇದನ್ನೆಲ್ಲ ಸಮಾಜ ತಿಳಿಯುವುದು ಬೇಡವೇ? ಇತಿಹಾಸದಲ್ಲಿ ಮುಚ್ಚಿಹೋದ ಅಧ್ಯಾಯಗಳನ್ನು ಹುಡುಕುವುದು ವಿವಾದ ಏಕೆ ಆಗಬೇಕು?