ಬಹುತ್ವ ಸಾಂಸ್ಕೃತಿಕ ಪರಂಪರೆ ಹೊಂದಿರುವ ಭಾರತದಲ್ಲಿ ಜಾತಿ, ಮತ, ಪಂಥ, ಧರ್ಮಗಳೆನ್ನದೆ ಸರ್ವರ ಅಭಿವೃದ್ಧಿಯು ಸರ್ಕಾರದ ಧ್ಯೇಯವಾಗಬೇಕು. ಯಾವುದೇ ಸಮುದಾಯವನ್ನೂ ನಿರ್ಲಕ್ಷಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ, ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಧಾರ್ಮಿಕ ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವುದು ಪ್ರಶಂಸನೀಯ. ಅನೇಕ ಅಲಕ್ಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿರುವುದು ಅತ್ಯಗತ್ಯ. ಅವುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ರಾಷ್ಟ್ರದ ಅಖಂಡತೆಯನ್ನು ಕಾಪಾಡಬೇಕಾಗಿದೆ. ಇಂತಹ ಮಾನವೀಯ, ಜೀವಪರ ಆಶಯಗಳ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ಶ್ರಮಿಸಲಿ.