‘ಈ ದಿನಗಳಲ್ಲಿ ಎಲ್ಲರೂ ತಮ್ಮನ್ನು ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಸಿಖ್ಖರು ಎಂದೆಲ್ಲ ಕರೆದುಕೊಳ್ಳುತ್ತಿದ್ದಾರೆ. ಯಾರಾದರೂ ಭಾರತೀಯರು ಉಳಿದಿದ್ದಾರೆಯೇ?’ ಎಂದು ಹರ್ಷ್ ಗೋಯಂಕಾ ಅವರು ಟ್ವೀಟ್ ಮೂಲಕ (ಪ್ರ.ವಾ., ಜ. 1) ಪ್ರಶ್ನಿಸಿರುವುದು ಪ್ರಜ್ಞಾವಂತಿಕೆಯಿಂದ ಕೂಡಿದೆ.
ಭಾಷೆ, ಧರ್ಮ, ಸಂಸ್ಕೃತಿ, ಜೀವನಶೈಲಿ... ಎಲ್ಲದರ ನೆಲೆಯಲ್ಲೂ ಭಾರತವು ವೈವಿಧ್ಯಮಯವಾಗಿರುವ ವಿಶಿಷ್ಟ ದೇಶ. ಜಾತ್ಯತೀತವಾಗಿ ಸಹಬಾಳ್ವೆ ನಡೆಸಲು ಪೂರಕವಾಗುವಂತಹ ಸಂವಿಧಾನವನ್ನು ದೇಶ ಹೊಂದಿದೆ.
ಧರ್ಮ, ಜಾತಿ, ಪ್ರಾಂತ್ಯದ ಹೆಸರಿನಲ್ಲಿ ಕಿತ್ತಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ, 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಧರ್ಮದ ಹೆಸರಿನಲ್ಲಿ ಗೋಡೆಗಳನ್ನು ನಿರ್ಮಿಸಿಕೊಳ್ಳಬಾರದು. ನಾವೆಲ್ಲರೂಮೊದಲು ಭಾರತೀಯರು, ನಂತರವಷ್ಟೇ ಭಾಷೆ, ರಾಜ್ಯ, ಧರ್ಮ ಎಂಬ ಮನೋಭಾವ ಎಲ್ಲರಲ್ಲೂ ಮೂಡಲಿ.