ಕೆಲವೊಮ್ಮೆ ಮಾತಿನ ಭರದಲ್ಲಿ, ಆಕ್ರೋಶಪೂರಿತ ಸನ್ನಿವೇಶಗಳಲ್ಲಿ ಇಂತಹ ಮಾತುಗಳು ಹೊರಬರಬಹುದು. ಸಿ.ಡಿ ವಿವಾದದಲ್ಲಿ ಸಿಲುಕಿರುವ ರಮೇಶ್ ಜಾರಕಹೊಳಿ ಅವರನ್ನು ಸಮರ್ಥಿಸುವ ಭರದಲ್ಲಿ ಸಚಿವರ ಬಾಯಿಯಿಂದ ಅಂತಹ ಕೆಟ್ಟ ಮಾತುಗಳು ಬಂದಿರಬಹುದು. ಆದರೆ, ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಭಾವೋದ್ವೇಗಕ್ಕೆ ಒಳಗಾಗಿ ಈ ಬಗೆಯ ಹೇಳಿಕೆಗಳನ್ನು ನೀಡಬಾರದು. ಪ್ರಸ್ತುತ ಅವರು ಆರೋಗ್ಯ ಸಚಿವರಾಗಿದ್ದು, ಕೊರೊನಾ ವಿರುದ್ಧದ ಹೋರಾಟದ ನಾಯಕತ್ವ ವಹಿಸಿದ್ದಾರೆ. ರಾಜ್ಯದಲ್ಲಿ ಕೊರೊನಾದ ಹಾವಳಿ ಗಂಭೀರ ಸ್ವರೂಪ ಪಡೆಯುತ್ತಿದೆ. ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇಂತಹ ಗಂಭೀರ ಹಾಗೂ ಸೂಕ್ಷ್ಮವಾದ ಸನ್ನಿವೇಶದಲ್ಲಿ ಆರೋಗ್ಯ ಸಚಿವರು ಎಡವಟ್ಟು ಮಾಡಿಕೊಂಡಿದ್ದಾರೆ. ಇನ್ನು ಮುಂದಾದರೂ ಅವರು ಜವಾಬ್ದಾರಿಯುತವಾಗಿ ವರ್ತಿಸಲಿ.