ನಾನು ವಿದ್ಯಾರ್ಥಿ ದೆಸೆಯಲ್ಲಿ ಕನ್ನಡದ ನವ ಸಂವೇದನಾಶೀಲ ಚಿಂತಕರಾದ ಲಂಕೇಶ್, ತೇಜಸ್ವಿ, ಚಿದಾನಂದ ಮೂರ್ತಿ, ಎಂ.ಎಂ.ಕಲಬುರ್ಗಿ ಮುಂತಾದವರ ಕೆಲವು ವಿಮರ್ಶಾ ಮತ್ತು ಸಂಶೋಧನಾ ಲೇಖನಗಳನ್ನು ಓದುತ್ತಿದ್ದಾಗ, ನನ್ನೊಳಗಿನ ಬರಹಗಾರನೂ ಜಾಗೃತನಾಗುತ್ತ ಹೋಗುತ್ತಿದ್ದ. ಅವರೆಲ್ಲರ ಆಲೋಚನಾ ಕ್ರಮಗಳು, ಸಾಹಿತ್ಯ ಹಾಗೂ ಸಂಸ್ಕೃತಿಯ ವಿಚಾರಗಳು ಹೊಸ ಮಾದರಿಗಳನ್ನು ನನಗೆ ಪರಿಚಯಿಸಿದವು. ಜೊತೆಗಿವು ಸೃಜನಶೀಲ ಮನಸ್ಸುಗಳಿಗೆ ಪರಿಕಲ್ಪನಾತ್ಮಕವಾಗಿ ಅಕ್ಷರ ಭಿತ್ತಿಯಾಗಿ ಪಡಿಯಚ್ಚು ಮೂಡಿಸಿಕೊಳ್ಳಲು ಸಹಾಯಕ ವಾಗುತ್ತಿದ್ದವು ಕೂಡ. ಆದರಿಂದು ಬಹುತೇಕ ಅಕಡೆಮಿಕ್ ಬರಹಗಾರರ ಕೃತಿಗಳು ಕನ್ನಡ ಪುಸ್ತಕ ಭಂಡಾರಗಳನ್ನು ಆಕ್ರಮಿಸಿಕೊಳ್ಳುತ್ತಿವೆ. ಇವುಗಳಲ್ಲಿ ಸ್ವಂತಿಕೆ ಹೋಗಲಿ ಸರಿಯಾದ ಪರಾಮರ್ಶೆಯನ್ನು ಸಹ ಕಾಣಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ.