ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ್ದ ಕನ್ನಡಪರ ಸಂಘಟನೆಗಳಿಗೆ ಕಲಬುರ್ಗಿ ಜಿಲ್ಲಾಡಳಿತವು ಕನ್ನಡ ಸಾಹಿತ್ಯ ಕುರಿತಾದ ಸ್ಪರ್ಧೆ ಅಯೋಜಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೀಗಾಗಿ, ಭಾಷಾಭಿಮಾನದ ಜೊತೆಗೆ ಭಾಷಾ ಜ್ಞಾನವನ್ನೂ ಸಾಬೀತುಪಡಿಸಬೇಕಾದ ಒತ್ತಡದಲ್ಲಿರುವ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳಿಗೆ ಇದೊಂದು ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ಸಂಘಟನೆಯ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.