ಇದೇ ತರ್ಕ ಅನುಸರಿಸಿದರೆ, ಶಾಸನಸಭಾಧ್ಯಕ್ಷರ ಶಾಸನಸಭೆಗಳ ಕಾರ್ಯ ಕಲಾಪಗಳನ್ನು ನಡೆಸುವ ನಿಷ್ಪಕ್ಷಪಾತತನವೂ ಪ್ರಶ್ನಾರ್ಹವಾಗುತ್ತದೆ ಎಂದು ಸಂಪಾದಕೀಯ (ಪ್ರ.ವಾ., ಜ. 23) ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ. ಈ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಸಲಹೆ ‘ಹುತ್ತವ ಬಡಿದಡೆ ಹಾವು ಸಾಯಬಲ್ಲದೆ?’ ಎಂಬ ವಚನವನ್ನು ನೆನಪಿಗೆ ತರುತ್ತದೆ.
ಮುಖ್ಯವಾಗಿ ನ್ಯಾಯಾಲಯವು ಇಂದು ಯೋಚಿಸಬೇಕಾಗಿರುವುದು, ಚುನಾವಣೆಗಳು ನಡೆದ ಕೆಲವೇ ತಿಂಗಳುಗಳಲ್ಲಿಯೇ (ಇತ್ತೀಚೆಗೆ ಗೋವಾ, ಗುಜರಾತ್ನಲ್ಲಿ ಕಂಡಂತೆ ಕೆಲವೇ ದಿನಗಳಲ್ಲಿ) ನಮ್ಮ ಜನಪ್ರತಿನಿಧಿಗಳು ತಾವು ಆಯ್ಕೆಯಾದ ಪಕ್ಷಗಳನ್ನು ತೊರೆದು ಹೋಗಲು ಏನು ಕಾರಣ ಮತ್ತು ಈ ಪ್ರವೃತ್ತಿಯನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ. ಈ ಪ್ರವೃತ್ತಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದೆ.