ಕ್ರಿಯಾಲೋಪದ ವಿಷಯದಲ್ಲಿ ಸ್ಪೀಕರ್ ತಮ್ಮ ನಿರ್ಧಾರ ತಿಳಿಸದೆ, ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ತಿಳಿಯುವುದಾಗಿ ಹೇಳಿದರು. ಒಟ್ಟಿನಲ್ಲಿ, ಪ್ರಸ್ತಾಪಿಸಿದ ವಿಷಯದ ಬಗ್ಗೆ ನಡೆಯಬೇಕಿದ್ದ ಮತ್ತು ಜನ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಗಂಭೀರವಾದ ಚರ್ಚೆ ನಡೆಯದೆ, ಏನೇನೋ ವಿಷಯಗಳು ಹರಿದಾಡಿ, ಕೂಗಾಟ, ಪ್ರದರ್ಶನಗಳ ಕೈ ಮೇಲಾಯಿತು. ವಿರೋಧ ಪಕ್ಷವಾದ ಬಿಜೆಪಿಯು ವಿಶ್ವಾಸಮತ ಚರ್ಚೆಗೆ ಪಟ್ಟು ಹಿಡಿದರೆ, ಆಡಳಿತಾರೂಢ ಮೈತ್ರಿ ಸರ್ಕಾರ ಹೇಗಾದರೂ ಬಚಾವಾಗಲೇಬೇಕೆಂದು ಶಪಥ ತೊಟ್ಟಂತಿತ್ತು. ಈ ಜಗ್ಗಾಟದ ನಡುವೆ, ಅಪಹಾಸ್ಯಕ್ಕೆ ತುತ್ತಾಗಿರುವ ಪ್ರಜಾತಂತ್ರದ ಬಗ್ಗೆ ಯಾರೂ ಯೋಚಿಸುವ ಗೋಜಿಗೇ ಹೋಗಲಿಲ್ಲ.