ಈ ಹಿಂದಿನ ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ (ಕೆಇಬಿ) ವಿದ್ಯುತ್ ಕಂಬ ಮತ್ತು ಹೊಸ ಮಾರ್ಗ ಅಳವಡಿಕೆ ಕೆಲಸಗಳಿಗೆ ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿ ಇತ್ತು. ಲೈನ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಕರೆದಾಗ ಇವರಿಗೂ ಸಂದರ್ಶನಕ್ಕೆ ಅವಕಾಶ ಕೊಟ್ಟು, ಅರ್ಹರಾದವರನ್ನು ಸಹಾಯಕ ಲೈನ್ಮ್ಯಾನ್ ಆಗಿ ನೇಮಿಸಿಕೊಳ್ಳುವುದು ರೂಢಿಯಲ್ಲಿತ್ತು. ಇದರಿಂದಾಗಿ, ಇಂದಲ್ಲ ನಾಳೆ ತಮ್ಮ ಸೇವೆಯನ್ನು ಕಾಯಂಗೊಳಿಸುತ್ತಾರೆ ಎನ್ನುವ ನಿರೀಕ್ಷೆಯಿಂದ, ದಿನಗೂಲಿ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುವಾಗಲೂ ಅವರಲ್ಲಿ ಶ್ರದ್ಧೆ ಇರುತ್ತಿತ್ತು. ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಅವಕಾಶ ಸಹ ಇರುತ್ತಿತ್ತು. ಇತರ ಇಲಾಖೆಗಳಲ್ಲೂ ಇಂತಹ ವ್ಯವಸ್ಥೆ ಇದ್ದಿರಬಹುದು. ಆದರೆ ಪೌರಕಾರ್ಮಿಕರ ಇತ್ತೀಚಿನ ಮುಷ್ಕರವನ್ನು ಗಮನಿಸಿದರೆ, ಈಗ ಇಂತಹ ವ್ಯವಸ್ಥೆ ಇದ್ದಂತೆ ಕಾಣುತ್ತಿಲ್ಲ. ಅದರ ಪರಿಣಾಮವಾಗಿ, ಕೆಲವು ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಭವಿಷ್ಯದ ಬಗೆಗೆ ಅಸ್ಥಿರತೆಯು ಕಾರ್ಮಿಕರನ್ನು ಕಾಡುತ್ತಿದೆ. ಈಗ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿರುವ ಸರ್ಕಾರ, ಅವರ ಸೇವೆ ಕಾಯಂಗೊಳಿಸುವ ಕುರಿತು ಪರಿಶೀಲಿಸುವುದಾಗಿ ಹೇಳಿದೆ. ಈ ಭರವಸೆ ಕೃತಿಗೆ ಇಳಿಯಲಿ.