ಲಾಕ್ಡೌನ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಕೊಳೆಗೇರಿವಾಸಿಗಳು ಹಸಿವಿನಿಂದ ನರಳಬಾರದೆಂಬ ಕಳಕಳಿಯಿಂದ ಅನೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ಮುಂದೆ ಬಂದು ಆಹಾರದ ಪೊಟ್ಟಣಗಳನ್ನು ಉಚಿತವಾಗಿ ಹಂಚುತ್ತಿರುವುದು ಶ್ಲಾಘನೀಯ. ಆದರೆ, ಹೀಗೆ ಹಂಚುತ್ತಿರುವ ಪೊಟ್ಟಣಗಳನ್ನು ಕೆಲವರು ಅವಶ್ಯಕತೆಗಿಂತ ಹೆಚ್ಚಾಗಿ ಪಡೆದು, ಬೇಕಾದುದನ್ನು ತಿಂದು, ಉಳಿದುದನ್ನು ಮೋರಿಗೆ ಬಿಸಾಡುತ್ತಿರುವ ದೃಶ್ಯವನ್ನು ಟಿ.ವಿ. ವಾಹಿನಿಗಳಲ್ಲಿ ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಇಡೀ ದೇಶವೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಈ ಸಂದರ್ಭದಲ್ಲಿ, ಉಚಿತವಾಗಿ ದೊರೆಯುವ ಆಹಾರದ ಮಹತ್ವವನ್ನು ತಿಳಿಯದ ಜನರಲ್ಲಿ ಅರಿವು ಮೂಡುವುದು ಯಾವಾಗ?